ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ತಾವೇ ಕಿಂಗ್ ಆಗಲಿದ್ದೇವೆ. ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗಲಿದೆ ಎಂದು ಭಾವಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸ್ವಂತ ಶಕ್ತಿ ಬಲದಿಂದಲೇ ಜೆಡಿಎಸ್ ಸರ್ಕಾರ ರಚನೆ ಮಾಡುವ ಮೂಲಕ ಕಿಂಗ್ ಆಗಲಿದೆ. ಅತಂತ್ರ ವಿಧಾನಸಭೆ ರಚನೆಯಾದರೆ, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ. ತಾವೇ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದಾಗಿ ಲೆಕ್ಕಾಚಾರ ಹಾಕಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚುನಾವಣಾ ಫಲಿತಾಂಶದಿಂದ ಭ್ರಮ ನಿರಸವಾಗಿದೆ.
ಇಂದು ಬೆಳಗೆ 10ಗಂಟೆ ತನಕವೂ ಅತಂತ್ರ ವಿಧಾನಸಭೆ ರಚನೆಯಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಜೆಡಿಎಸ್ನ ಮುಖಂಡರು ಭಾವಿಸಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭರ್ಜರಿ ಬಹುಮತ ಸಿಕ್ಕಿದ್ದರಿಂದ ಅಧಿಕಾರಕ್ಕೆ ಬರುವ ಜೆಡಿಎಸ್ ಕನಸು ಭಗ್ನಗೊಂಡಿದೆ.
ಕುಸಿದ ಕ್ಷೇತ್ರಗಳ ಸಂಖ್ಯೆ: ಜಾತ್ಯತೀತ ಜನತಾದಳಕ್ಕೆ ಮತದಾರರು ಜೆಡಿಎಸ್ ನಿರೀಕ್ಷಿಸಿದ ಸೀಟ್ಗಳನ್ನು ನೀಡಿಲ್ಲ. ಕಳೆದ 2018ರ ಚುನಾವಣೆಯಲ್ಲಿ 37 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸೀಟುಗಳನ್ನು ಗೆದ್ದು ಕಳಪೆ ಸಾಧನೆ ಮಾಡಿದೆ. ಈ ಫಲಿತಾಂಶದಿಂದ ಜೆಡಿಎಸ್ ಅಧಿಕಾರಕ್ಕೆ ಬರುವುದಿರಲಿ, ಪಕ್ಷದ ಅಸ್ತಿತ್ವವೇ ಕಷ್ಟವಾಗಿದೆ.
ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚೆನ್ನಪಟ್ಟಣದಲ್ಲಿ ಗೆದ್ದರೂ, ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ದೇವೇಗೌಡರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸ್ಥಿತಿಯಾಗಿದೆ.
ಕ್ಷೇತ್ರ ಉಳಿಸಿಕೊಳ್ಳುವಲ್ಲಿ ವಿಫಲ: ಜೆಡಿಎಸ್ನ ಭದ್ರಕೋಟೆ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ 7ಕ್ಕೆ 7 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್, ಈ ಬಾರಿ ಮಂಡ್ಯದಲ್ಲಿ ಕೇವಲ 1 ಕ್ಷೇತ್ರಕ್ಕೆ ಸೀಮಿತಗೊಂಡಿದೆ. ರಾಮನಗರ ಜಿಲ್ಲೆಯಲ್ಲಿ ರಾಮನಗರ ಮತ್ತು ಮಾಗಡಿಯಲ್ಲಿ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಇಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಕ್ಷೇತ್ರಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಅರಸೀಕೆರೆಯಲ್ಲಿ ಪಕ್ಷ ಸೋತಿದೆ. ಬೇಲೂರು, ಸಕಲೇಶಪುರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಪಾಲಿಗೆ ಮಹತ್ತರದ್ದಾಗಿದ್ದ ಹಾಸನ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ಅವರನ್ನು ಪರಾಭವಗೊಳಿಸಿ, ದೇವೇಗೌಡರನ್ನು ಟೀಕಿಸಿದ್ದ ಪ್ರೀತಂಗೌಡಕ್ಕೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದೆ.
ಈ ಚುನಾವಣೆಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದ ಜೆಡಿಎಸ್ ನಾಯಕರಿಗೆ ಇದರಲ್ಲಿ ಅರ್ಧದಷ್ಟು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಅತಂತ್ರ ವಿಧಾನಸಭೆ ಆಗುತ್ತದೆ ಎಂಬ ಜೆಡಿಎಸ್ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಕೈ ಹಿಡಿದ ಐದು 'ಗ್ಯಾರಂಟಿ' ಭರವಸೆಗಳು