ಕರ್ನಾಟಕ

karnataka

ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಅನಂತ ಕುಮಾರ್ ಹೆಗಡೆ ಉಚ್ಛಾಟನೆಗೆ ಜೆಡಿಎಸ್ ಆಗ್ರಹ

By

Published : Feb 4, 2020, 6:09 PM IST

ಗಾಂಧಿಜೀಯವರ ನಾಲ್ಕನೇ ತಲೆಮಾರಿನ ವ್ಯಕ್ತಿ ಅನಂತ ಕುಮಾರ್ ಹೆಗಡೆ. ಅವರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ. ಅನಂತಕುಮಾರ್ ಹೆಗಡೆ ಅವರು ಬೇಕಂತಲೇ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ವಿಶ್ವ ಮೆಚ್ಚುವ ನಾಯಕನ ಬಗ್ಗೆ ಈ ರೀತಿ ಮಾತನಾಡಬಾರದು. ಕಾನೂನು ಸುವ್ಯವಸ್ಥೆ ಕದಡುವಂತಹ ಹೇಳಿಕೆ ಕೊಟ್ಟಿದ್ದಾರೆ. ಇವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ ಎಂಬ ಭಾವನೆ ಬರುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.

JDS demands expulsion of Ananthakumar Hegde
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ

ಬೆಂಗಳೂರು : ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಪಕ್ಷದಿಂದ ತಕ್ಷಣ ಉಚ್ಛಾಟಿಸಬೇಕು ಹಾಗೂ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮಾತನಾಡಿ, ಗಾಂಧಿಜೀಯವರ ನಾಲ್ಕನೇ ತಲೆಮಾರಿನ ವ್ಯಕ್ತಿ ಅನಂತಕುಮಾರ್ ಹೆಗಡೆ. ಅವರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ. ಅನಂತಕುಮಾರ್ ಹೆಗಡೆ ಅವರು ಬೇಕಂತಲೆ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ವಿಶ್ವ ಮೆಚ್ಚುವ ನಾಯಕನ ಬಗ್ಗೆ ಈ ರೀತಿ ಮಾತನಾಡಬಾರದು. ಕಾನೂನು ಸುವ್ಯವಸ್ಥೆ ಕದಡುವಂತಹ ಹೇಳಿಕೆ ಕೊಟ್ಟಿದ್ದಾರೆ. ಇವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ ಎಂಬ ಭಾವನೆ ಬರುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ನಾಯಕರು ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಬಿಜೆಪಿಗೆ ಗಾಂಧೀಜಿ ಬಗ್ಗೆ ಗೌರವ ಇದ್ದರೆ ಸಂಸತ್ತಿನಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ

ದೇಶಾದ್ಯಂತ ಸಿಎಎ ವಿರುದ್ದ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರಗಳು ತಪ್ಪು ಮಾಡಿದಾಗ ಪ್ರತಿಭಟನೆಗಳು ನಡೆಯುವುದು ಸಹಜ. ಆದರೆ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು.ಇತ್ತೀಚಿಗೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಕೆಲಸ ದೆಹಲಿಯಲ್ಲಿ ನಡೆಯಿತು.ಇದರ ಹಿಂದೆ ಕೇಂದ್ರ ಸರ್ಕಾರದ ಕುಮ್ಮಕ್ಕು ಇದೆ ಎಂಬ ಅನುಮಾನ ಇದೆ ಎಂದು ದೂರಿದರು.

ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಅಭಿವೃದ್ಧಿಗೆ ಸಹಕಾರ ಕೊಟ್ಟಿಲ್ಲವೆಂದು ಆರೋಪ ಮಾಡಿದ್ರು. ಈಗ ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಸಚಿವ ಸ್ಥಾನಕ್ಕೆ ಹಗಲು ರಾತ್ರಿ ಜಪ ಮಾಡುತ್ತಿದೆ. ನಿಜವಾಗಲೂ ಇವರಿಗೆ ಅಭಿವೃದ್ಧಿ ಮುಖ್ಯವಾಗಿದ್ದರೆ, ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ರಾಜ್ಯದ ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದು ಹೇಳಿದರು.

'ಬಿಜೆಪಿಗೆ ಮುಂದಿದೆ ಮಾರಿ ಹಬ್ಬ'

ಆಡಳಿತ ಪಕ್ಷದಲ್ಲಿ ಎಷ್ಟೊಂದು ಒತ್ತಡಗಳಿವೆ. ಯಾವ ಕಾರಣಕ್ಕೆ ಶಾಸಕರು ರಾಜೀನಾಮೆ ಕೊಟ್ಟಿದ್ದರೋ, ಅದೇ ಪರಿಸ್ಥಿತಿ ಮತ್ತೆ ಬಂದಿದೆ. ಹೆಚ್.ಡಿ. ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ರಾಜೀನಾಮೆ ಕೊಟ್ಟಿದ್ರು. ಈಗ ಕೂಡ ಮುಖ್ಯಮಂತ್ರಿಗಳು ಅವರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಇದನ್ನೆಲ್ಲಾ ಗಮನಿಸಿದರೆ ಬಿಜೆಪಿಗೆ ಮುಂದೆ ಮಾರಿ ಹಬ್ಬ ಕಾದಿದೆ ಎಂದು ವ್ಯಂಗ್ಯವಾಡಿದರು.

ಹೆಚ್. ವಿಶ್ವನಾಥ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್.ಕೆ. ಕುಮಾರಸ್ವಾಮಿ, ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವನಾಥ್ ಈಗ ಮತ್ತೆ ಪುಸ್ತಕ ಬರೆಯಲು ಕುಳಿತಿದ್ದಾರೆ. ಈಗ ಅವರಿಗೆ ಸಾಕಷ್ಟು ಸಮಯ ಸಿಕ್ಕಿದೆ. ಪುಸ್ತಕ ಬರೆಯುತ್ತಾ ಕೂರಲಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಆರ್ಥಿಕ ಶಕ್ತಿ ಇನ್ನೂ ಕುಸಿಯುವ, ನಿರುದ್ಯೋಗ ಹೆಚ್ಚುವಂತಹ ಬಜೆಟ್ ಕೊಟ್ಟಿದ್ದಾರೆ. ಎಲ್ ಐಸಿ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಹೊರಟಿದೆ. ಬಿಎಸ್ ಎನ್ ಎಲ್​ನಂತಹ ಕಂಪನಿಗಳು ಮುಚ್ಚುವಂತಹ ಸ್ಥಿತಿ ತಲುಪಿದೆ. ಈ ಬಗ್ಗೆ ಯುವಕರು ಯೋಚನೆ ಮಾಡಬೇಕಿದೆ. ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ಇತರ ಪದಾರ್ಥಗಳ ಬೆಲೆ ಕೂಡಾ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂತಾಪ :

ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವರಾಗಿದ್ದ ಡಿ.ಮಂಜುನಾಥ್ ಅವರ ನಿಧನಕ್ಕೆ ಪಕ್ಷದ ವತಿಯಿಂದ ಸಂತಾಪ ಸೂಚಿಸುವುದಾಗಿ ಹೆಚ್.ಕೆ. ಕುಮಾರಸ್ವಾಮಿ ಹೇಳಿದರು. ಪಕ್ಷ ಕಷ್ಟದಲ್ಲಿದ್ದಾಗ ಪಕ್ಷಕ್ಕಾಗಿ ಅವರು ಶ್ರಮವಹಿಸಿದ್ದಾರೆ. ಅನೇಕ ಜನರ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಜನನಾಯಕರಾಗಿದ್ದರು ಎಂದು ಬಣ್ಣಿಸಿದರು.

ABOUT THE AUTHOR

...view details