ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ್ದ ಸಚಿವ ಸೋಮಣ್ಣ ಮಾತಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಸೋಮಣ್ಣ ಮತ್ತು ಬಿಜೆಪಿಗೆ ಸೋಲಿನ ಭೀತಿ ಆವರಿಸಿದೆ. ಸೋಲುವ ಭೀತಿಯಿಂದ ಈ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ. ಮೊದಲಿಂದಲೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ. ಬಿಜೆಪಿಯವರು ಹೇಳಿದ್ದು ಇದುವರೆಗೂ ಯಾವುದೂ ನಿಜವಾಗಿಲ್ಲ. ಇಲ್ಲಿನ ಮತದಾರರು ಜೆಡಿಎಸ್ ಪಕ್ಷದ ಜೊತೆಗಿದ್ದಾರೆ. ಸೋಮಣ್ಣ ಅವರಿಗೆ ಮಹಾಲಕ್ಷ್ಮಿ ಲೇಔಟ್ನ ಒಳ ಗುಟ್ಟು ಗೊತ್ತಿಲ್ಲ. ಸೋಮಣ್ಣಗೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತದಾರರ ಸಂಪರ್ಕವೂ ಇಲ್ಲ. ಆದ್ದರಿಂದ ಸೋಮಣ್ಣ ಮಾತಿಗೆ ಬೆಲೆ ಕೊಡುವ ಅಗತ್ಯ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಮಣ್ಣ ಮಾತಿಗೆ ಟಾಂಗ್ ನೀಡಿದ ಜೆಡಿಎಸ್ ಅಭ್ಯರ್ಥಿ ಇನ್ನು ಸೋಮಣ್ಣ ಆರೋಪಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜ್ ತಿರುಗೇಟು ನೀಡಿ ಇಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಇಲ್ಲಿ ಮೂರು ಪಕ್ಷಗಳು ಅವರದ್ದೇ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ. ಸೋಮಣ್ಣ ಆರೋಪ ಕೇವಲ ತಂತ್ರಗಾರಿಕೆ. ಈ ತರ ಗಿಮಿಕ್ ಮಾಡಿ ಮತ ಸೆಳೆಯೋ ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳೋ ಸಲುವಾಗಿ ಈ ರೀತಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಈ ರೀತಿ ಗೊಂದಲ ಸೃಷ್ಟಿ ಮಾಡಿದ್ರೆ, ಮತಗಳಾಗಿ ಪರಿವರ್ತನೆ ಆಗುತ್ತೆ ಅಂತ ಅಂದುಕೊಂಡಿದ್ದಾರೆ ಎಂದರು. ಅಲ್ಲದೆ ಸೋಮಣ್ಣನ ಆರೋಪ ಸತ್ಯಕ್ಕೆ ದೂರವಾದದ್ದು. ಬಿಜೆಪಿ ಯಾವಾಗ ಬೇಕಾದ್ರೂ ಬಣ್ಣ ಬದಲಿಸುತ್ತೆ, ಸಮಯ ಸಾಧಕರು ಅವರು ಎಂದ ಶಿವರಾಜ್, ಸಾರಾಸಗಟಾಗಿ ಸೋಮಣ್ಣ ಆರೋಪವನ್ನು ತಳ್ಳಿಹಾಕಿದರು.
ಇನ್ನು ಸ್ವತಃ ತಮ್ಮ ಪಕ್ಷದ ಸಚಿವರ ಮಾತಿನ ಬಗ್ಗೆ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪ್ರತಿಕ್ರಿಯಿಸಿ, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಸಮರ್ಥವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಫಲಿತಾಂಶ ಬಂತು, ಅದೇ ರೀತಿ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೂಡ ಬರುತ್ತೆ. ಈ ಕ್ಷೇತ್ರದಲ್ಲಿದ್ದ ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ಬಿಜೆಪಿ ನಾಯಕರು ಬಗೆಹರಿಸಿದ್ದಾರೆ ಎಂದರು. ಆದ್ರೆ ನಿಖರವಾಗಿ ಒಳ ಒಪ್ಪಂದದ ಕುರಿತು ಯಾವುದೇ ಆರೋಪಗಳನ್ನಾಗಲೀ, ಪ್ರತಿಕ್ರಿಯೆಯನ್ನಾಗಲೀ ನೀಡಲು ಅವರು ಹಿಂದೇಟು ಹಾಕಿದರು.