ಕರ್ನಾಟಕ

karnataka

ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ಜನಸೇವಕ ಯೋಜನೆ ಪುನಾರಂಭಕ್ಕೆ ಬ್ರೇಕ್ ಬಿದ್ದಿರುವುದೇಕೆ!?

ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಬೆಂಗಳೂರಿನ 4 ಕಡೆ ಆರಂಭವಾಗಿದ್ದ ಜನಸೇವಕ ಯೋಜನೆ ಸದ್ಯ ಸ್ಥಗಿತಗೊಂಡಿದೆ.

By

Published : Aug 22, 2020, 11:33 PM IST

Published : Aug 22, 2020, 11:33 PM IST

ETV Bharat / state

ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ಜನಸೇವಕ ಯೋಜನೆ ಪುನಾರಂಭಕ್ಕೆ ಬ್ರೇಕ್ ಬಿದ್ದಿರುವುದೇಕೆ!?

janasevaka resume delay
ಜನಸೇವಕ ಯೋಜನೆ

ಬೆಂಗಳೂರು: ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಜನಸೇವಕ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಸದ್ಯ ಬೆಂಗಳೂರಿನ‌ 4 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಯಲ್ಲಿರುವ ಈ ಯೋಜನೆಗೆ ಕೊರೊನಾ ಬ್ರೇಕ್ ಹಾಕಿದೆ.

ಜನಸೇವಕ ಯೋಜನೆ

ನಾಗರಿಕರ ಮನೆ ಬಾಗಿಲಿಗೆ ಸೇವೆಯನ್ನು ಮುಟ್ಟಿಸುವ ಉದ್ದೇಶದೊಂದಿಗೆ ಸರ್ಕಾರ ಫೆಬ್ರವರಿಯಲ್ಲಿ ಜನಸೇವಕ ಯೋಜನೆಗೆ ಚಾಲನೆ‌ ನೀಡಿತ್ತು. ಜನ ಸೇವಕ ಯೋಜನೆಯನ್ನು ಪೈಲಟ್ ಆಧಾರದಲ್ಲಿ ಮೊದಲಿಗೆ ಮಾರ್ಚ್ 2019 ರಂದು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತರಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ಅದನ್ನು ರಾಜಾಜಿನಗರ, ಮಹದೇವಪುರ, ಟಿ.ದಾಸರಹಳ್ಳಿ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗಿತ್ತು. ಹೋಂ ಡೆಲಿವರಿ ಜನಸೇವಕ ಯೋಜನೆ ಪುನರಾರಂಭಕ್ಕೆ ಹಣಕಾಸು ಕೊರತೆಯೂ ಅಡ್ಡಗಾಲಾಗಿ ಪರಿಣಮಿಸಿದೆ.

ಏನಿದು ಜನಸೇವಕ ಯೋಜನೆ:
ಕಂದಾಯ, ಪೊಲೀಸ್, ಕಾರ್ಮಿಕ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಬಿಬಿಎಂಪಿ ಸೇರಿ 6 ಇಲಾಖೆಗಳ ಒಟ್ಟು 53 ವಿವಿಧ ಸೇವೆಗಳನ್ನು ಜನಸೇವಕ ಯೋಜನೆಯಡಿ ಪೂರೈಸಲಾಗುತ್ತಿದೆ. ಜಾತಿ ಪ್ರಮಾಣ ಪತ್ರ, ಪಿಂಚಣಿ, ಖಾತಾ ಬದಲಾವಣೆ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಮುಂತಾದ ಸೇವೆಗಳನ್ನು ಜನಸೇವಕರ ಮೂಲಕ ನಿಗದಿತ ಅವಧಿಯಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ.

ನಾಗರಿಕರು ಮೊಬೈಲ್ ಆ್ಯಪ್​, ಕಾಲ್ ಸೆಂಟರ್, ವೆಬ್ ಸೈಟ್ ಮೂಲಕ ಈ ಜನಸೇವಕ ಸೇವೆಯನ್ನು ಪಡೆಯಬಹುದಾಗಿದೆ. ತಮ್ಮ ದಾಖಲೆಗಳನ್ನು ನೀಡಿ, ನಿಗದಿತ ಶುಲ್ಕದೊಂದಿಗೆ ಪ್ರತಿ ಜನಸೇವಕ ಸೇವೆಗೆ 115 ರೂ. ಹೆಚ್ಚುವರಿ ಪಾವತಿಸಬೇಕು. ಜನಸೇವಕರು ಮನೆ ಬಾಗಿಲಿಗೆ ಬಂದು ಸೇವೆಯನ್ನು ಪೂರೈಕೆ ಮಾಡುತ್ತಾರೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ.

ಜನಸೇವಕರಿಗೆ ಕೊರೊನಾ ಬ್ರೇಕ್:

ಲಾಕ್‌ಡೌನ್ ವೇಳೆ ಜನಸೇವಕ ಯೋಜನೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿತ್ತು.‌ ಏಪ್ರಿಲ್ ನಿಂದ ಜನ‌ಸೇವಕ‌ ಯೋಜನೆಯನ್ನು ನಿಲ್ಲಿಸಲಾಗಿದೆ. ಇದೀಗ ಲಾಕ್‌ಡೌನ್ ತೆರವಾಗಿದ್ದರೂ ಜನಸೇವಕ ಯೋಜನೆ ಪುನರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ.

ಕೊರೊನಾ ಅಟ್ಟಹಾಸ ಬೆಂಗಳೂರಲ್ಲಿ ಹೆಚ್ಚಿದೆ ಎಂಬ ಕಾರಣದಿಂದ ಜನಸೇವಕ ಯೋಜನೆಯನ್ನು ಪುನರಾರಂಭಗೊಳಿಸಿಲ್ಲ. ಜನಸೇವಕರು ಹಾಗೂ ನಾಗರಿಕರ ಹಿತರಕ್ಷಣೆಯನ್ನು ದೃಷ್ಟಿಯಲ್ಲಿಟ್ಟು ಸೇವೆಯನ್ನು ಸದ್ಯ ತಡೆ ಹಿಡಿದಿದ್ದೇವೆ ಎಂದು ಜನಸೇವಕ ಯೋಜನೆಯ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ಸೇವೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಎಲ್ಲ ತಯಾರಿಗಳನ್ನು ಮಾಡಿದ್ದೇವೆ. ಈಗಾಗಲೇ ನಮ್ಮ ಜನಸೇವಕರು ಕೋವಿಡ್-19 ಮುಂಜಾಗ್ರತಾ ಕ್ರಮಗಳೊಂದಿಗೆ ಸೇವೆಯನ್ನು ನೀಡಲು ಸನ್ನದ್ಧರಾಗಿದ್ದಾರೆ. ಆದರೆ ಕೊರೊನಾ ಪ್ರಮಾಣ ಕಡಿಮೆಯಾದ ಬಳಿಕ ಅಂದರೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಜನಸೇವಕ ಯೋಜನೆ ಪುನರಾರಂಭಿಸಲು ಯೋಜಿಸಿದ್ದೇವೆ. ಜನಸೇವಕರು ಅಳವಡಿಸಿಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಒಂದು ವಿಡಿಯೋವನ್ನೂ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜನಸೇವಕ ಯೋಜನೆಗೆ ಹಣದ ಕೊರತೆ:

ಲಾಕ್‌ಡೌನ್ ಹಿನ್ನೆಲೆ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಜನಸೇವಕ ಯೋಜನೆ ಪುನರಾರಂಭಕ್ಕೆ ಹಣಕಾಸು ಕೊರತೆಯೂ ಅಡ್ಡಗಾಲಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್​​ನಲ್ಲಿ ಜನಸೇವಕ ಯೋಜನೆ ಮತ್ತು ಸೇವಾ ಸಿಂಧು ಸೇವೆಗಾಗಿ ಕೇವಲ 8 ಕೋಟಿ ರೂ.‌ ಮೀಸಲಿರಿಸಲಾಗಿದೆ.‌ ಪ್ರತಿ ವಾರ್ಡ್ ನಲ್ಲಿ ಒಬ್ಬರು ಜನಸೇವಕರಂತೆ ನಾಲ್ಕು ಕ್ಷೇತ್ರಗಳ ವಾರ್ಡ್ ನಲ್ಲಿ ಸುಮಾರು 35 ಜನಸೇವಕರನ್ನು ನಿಯೋಜಿಸಲಾಗಿದೆ. ಪ್ರತಿ ಜನಸೇವಕರಿಗೆ ಸುಮಾರು 14,000 ರೂ. ಪ್ರೋತ್ಸಾಹಧನ ನಿಗದಿಗೊಳಿಸಲಾಗಿದೆ.

ಈಗಾಗಲೇ ಆರ್ಥಿಕ ಸಂಕಷ್ಟದ ಹಿನ್ನೆಲೆ ಆರ್ಥಿಕ ಇಲಾಖೆ ಹೊಸ ಯೋಜನೆಗಳಿಗೆ ಹಣ ಬಿಡುಗಡೆಯನ್ನು ಸೀಮಿತಗೊಳಿಸಿದೆ. ಮಿತವ್ಯಯದಡಿ ಅಗತ್ಯ ಯೋಜನೆಗಳಿಗೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಹಣ ಬಿಡುಗಡೆಯನ್ನು ನಿರ್ಬಂಧಿಸಿದೆ. ಹೀಗಾಗಿ ಈ ಯೋಜನೆಗೂ ಹಣ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

ಹೀಗಾಗಿ ಸರ್ಕಾರಿ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಡಿ ಜನಸೇವಕ ಯೋಜನೆಯನ್ನು ನಿರ್ವಹಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸೂಕ್ತ ವೆಂಡರ್​ಗಳ ಆಯ್ಕೆ ಮಾಡಲು ಟೆಂಡರ್ ಕರೆಯಲೂ ನಿರ್ಧರಿಸಿದೆ. ಆ ಮೂಲಕ ಈ ಯೋಜನೆಯಿಂದ ಬೊಕ್ಕಸದ ಮೇಲಾಗುವ ಹೊರೆಯನ್ನು ಕಡಿಮೆಗೊಳಿಸಲು ಮುಂದಾಗಿದೆ.

ಜನಸೇವಕ ಯೋಜನೆ
ಜನಸೇವಕ ಯೋಜನೆ
ಜನಸೇವಕ ಯೋಜನೆ
ಜನಸೇವಕ ಯೋಜನೆ
ಜನಸೇವಕ ಯೋಜನೆ ಸ್ಥಿತಿಗತಿ:
ರಾಜಾಜಿನಗರ:ಒಟ್ಟು ಸೇವಾ ಬುಕ್ಕಿಂಗ್- 635 - ಒಟ್ಟು ಸೇವಾ ವ್ಯವಹಾರ- 1512;ಮಹದೇವಪುರ:ಒಟ್ಟು ಸೇವಾ ಬುಕ್ಕಿಂಗ್-1044- ಒಟ್ಟು ಸೇವಾ ವ್ಯವಹಾರ- 2734;ಬೊಮ್ಮನಹಳ್ಳಿ:ಒಟ್ಟು ಸೇವಾ ಬುಕ್ಕಿಂಗ್- 1151-ಒಟ್ಟು ಸೇವಾ ವ್ಯವಹಾರ- 2920;ಟಿ.ದಾಸರಹಳ್ಳಿ:ಒಟ್ಟು ಸೇವಾ ಬುಕ್ಕಿಂಗ್- 7110- ಒಟ್ಟು ಸೇವಾ ವ್ಯವಹಾರ- 23,061

ABOUT THE AUTHOR

...view details