ಬೆಂಗಳೂರು: ಈಗಾಗಲೇ ನಮ್ಮ ರಾಜ್ಯದಿಂದ ಅಸಂಖ್ಯಾತ ವಲಸಿಗರು ಅವರ ರಾಜ್ಯಗಳಿಗೆ ಹೋಗಲು ಸಿದ್ಧರಾಗಿದ್ದಾರೆ. ಇನ್ನೂ ಅನೇಕ ಕನ್ನಡಿಗರು ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಕಾತುರದಿಂದ ಕಾಯುತ್ತಿದ್ದಾರೆ.
ಗಡಿ ಭಾಗದಲ್ಲಿ ಚೆಕ್ಪೋಸ್ಟ್ ಲಾಕ್ಡೌನ್ನಿಂದ ಬೇರೆ, ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸಿಗರ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅದರಂತೆ ರಾಜ್ಯ ಸರ್ಕಾರ ವಲಸಿಗರನ್ನು ಅವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರೂ ಈಗ ತವರಿಗೆ ಬರಲು ಹಾತೊರೆಯುತ್ತಿದ್ದು, ಈ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಗಡಿ ಭಾಗದಲ್ಲಿ ಚೆಕ್ಪೋಸ್ಟ್ ರಾಜ್ಯಕ್ಕೆ ಬರಲು ಇಚ್ಚಿಸುವ ಕನ್ನಡಿಗರೆಷ್ಟು?:
ಬೇರೆ ರಾಜ್ಯಗಳಲ್ಲಿ ಸಿಲುಕಿ ಪರದಾಡುತ್ತಿರುವ ಕನ್ನಡಿಗರು ಸೇವಾಸಿಂಧು ವೆಬ್ ಸೈಟ್ನಲ್ಲಿ ತಮ್ಮ ತವರಿಗೆ ಪ್ರಯಾಣಿಸಲು ಪಾಸ್ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇಂದು ಸೇವಾ ಸಿಂಧುನಲ್ಲಿ ಸುಮಾರು 66 ಸಾವಿರ ಕನ್ನಡಿಗರು ರಾಜ್ಯಕ್ಕೆ ಬರಲು ಅರ್ಜಿ ಸಲ್ಲಿಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ತಮಿಳುನಾಡಿನಿಂದ ಹೆಚ್ಚಿನ ಕನ್ನಡಿಗರು ಕರ್ನಾಟಕಕ್ಕೆ ಮರಳಲು ಅರ್ಜಿ ಸಲ್ಲಿಸಿದ್ದಾರೆ ಎಂದು ನೋಡಲ್ ಅಧಿಕಾರಿ ರಾಜಕುಮಾರ್ ಖತ್ರಿ ತಿಳಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು 47 ಸಾವಿರ ಮಂದಿ ಕನ್ನಡಿಗರ ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಅವರಿಗೆ ಪ್ರಯಾಣದ ಅನುಮತಿ ಪಾಸ್ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇ-ಪಾಸ್ಗೆ ಒಂದು ವಾರದ ಕಾಲಾವಧಿಯಿದ್ದು, ಅಷ್ಟರೊಳಗೆ ಅವರು ವಾಪಸ್ ಕರ್ನಾಟಕಕ್ಕೆ ಬರಬೇಕು ಎಂದು ನೋಡಲ್ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರದಿಂದ ವಿಳಂಬ ನೀತಿ:
ಇತ್ತ ರಾಜ್ಯ ಸರ್ಕಾರ ಕನ್ನಡಿಗರನ್ನು ವಾಪಸ್ ಕರೆಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನಲಾಗುತ್ತಿದೆ. ತವರಿಗೆ ಮರಳುವ ಕನ್ನಡಿಗರನ್ನು ಗಡಿ ಭಾಗದಲ್ಲಿ ತಪಾಸಣೆ ಮಾಡಲು ವೈದ್ಯಕೀಯ ಕಿಟ್ ಕೊರತೆ ಇರುವುದರಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಗಡಿ ಭಾಗದಲ್ಲಿ ತಪಾಸಣೆ ಮಾಡಲು ಬೇಕಾಗಿರುವ ಮೂಲ ಸೌಲಭ್ಯ ಒದಗಿಸಬೇಕಿದೆ. ಅವರನ್ನು ಕ್ವಾರಂಟೈನ್ನಲ್ಲಿ ಇರಿಸುವುದು ಅಗತ್ಯವಾಗಿರುವುದರಿಂದ ಈ ಸಂಬಂಧವೂ ಗೊಂದಲ ಏರ್ಪಟ್ಟಿದೆ. ಈವರೆಗೆ ಕೇವಲ 4068 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಸುಮಾರು 45 ಸಾವಿರ ಅರ್ಜಿ ಅನುಮತಿಗಾಗಿ ಬಾಕಿ ಉಳಿದಿವೆ. ಇನ್ನು ರಾಜ್ಯ ನೋಡಲ್ ಅಧಿಕಾರಿಗಳು ಸುಮಾರು 6,700 ಅರ್ಜಿಗಳಿಗೆ ಇನ್ನೂ ಅನುಮತಿ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟು 56,620 ಆನ್ ಲೈನ್ ಅರ್ಜಿಗಳು ಬಾಕಿ ಉಳಿದಿವೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು 35 ಸಾವಿರ ಕನ್ನಡಿಗರು ತವರಿಗೆ ವಾಪಸ್ಸಾಗಲು ಸರ್ಕಾರಿ ಬಸ್ ಸೇವೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಆಯಾ ರಾಜ್ಯದ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ನೆರೆ ರಾಜ್ಯಗಳ ಅಧಿಕಾರಿಗಳು ತ್ವರಿತಗತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಸುಮಾರು 7,000 ಕನ್ನಡಿಗರು ತಮ್ಮದೇ ವಾಹನದಲ್ಲಿ ಮರಳಲು ಸಿದ್ಧರಿದ್ದು, ಚೆಕ್ಪೋಸ್ಟ್ಗಳಲ್ಲಿ ಇನ್ನೂ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಇನ್ನೂ ನಾಲ್ಕೈದು ದಿನ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇರೆ ರಾಜ್ಯದ ವಲಸಿಗರನ್ನು ತವರಿಗೆ ಕಳುಹಿಸುವಲ್ಲಿ ಸರ್ಕಾರ ತೋರಿಸುತ್ತಿರುವ ಗಾಂಭಿರ್ಯತೆಯನ್ನು ಬೇರೆ ರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆಸುವಲ್ಲಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.