ಬೆಂಗಳೂರು :ನಗರದ ಪೂರ್ವ ವಲಯದ ಕೋವಿಡ್ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು. ಲಾಕ್ಡೌನ್ ಚಿಂತನೆ ಸದ್ಯಕ್ಕಿಲ್ಲ, ಜನಸಾಮಾನ್ಯರು ಬದುಕು ನಡೆಸಲು ಅನಾನುಕೂಲ ಆಗಬಾರದೆಂದು ಲಾಕ್ಡೌನ್ ತೀರ್ಮಾನಕ್ಕೆ ಇನ್ನೂ ಬಂದಿಲ್ಲ ಎಂದು ಅವರು ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ವಿ ಸೋಮಣ್ಣ, ಬಿಯು ನಂಬರ್ ಇದ್ದರೆ ಮಾತ್ರ ಆಸ್ಪತ್ರೆ ಬೆಡ್ ನೀಡುವುದರಿಂದ ಸಾಕಷ್ಟು ಸಾಮಾನ್ಯ ಜನಕ್ಕೆ ಸಮಸ್ಯೆ ಆಗ್ತಿದೆ. ಹೀಗಾಗಿ, ಇನ್ನು ಮುಂದೆ ಬಿಯು ನಂಬರ್ ಇಲ್ಲದೆಯೂ, ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕಾದರೆ, ಬೆಡ್ ವ್ಯವಸ್ಥೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಸಚಿವ ವಿ ಸೋಮಣ್ಣ.. ನಗರದೆಲ್ಲೆಡೆ ಮತ್ತೆ ಸ್ಯಾನಿಟೈಸೇಷನ್ :ಕೋವಿಡ್ ಮೊದಲನೇ ಹಂತದಲ್ಲಿ ವ್ಯಾಪಕವಾಗಿ ಮಾಡಿದ್ದ ಸ್ಯಾನಿಟೈಸೇಷನ್ ಕಾರ್ಯಕ್ರಮವನ್ನು ಮತ್ತೆ ನಗರದ ಗಲ್ಲಿ ಗಲ್ಲಿಗಳಲ್ಲೂ ಮಾಡಲಾಗುವುದು. ಜಲಮಂಡಳಿ ಹಾಗೂ ಅಗ್ನಿಶಾಮಕ ದಳದ ವತಿಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುವುದು ಎಂದರು.
ಅಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಾ ಕೊಠಡಿ ಆರಂಭ ಮಾಡ್ತೇವೆ. ಒಂದೊಂದು ವಾರ್ಡ್ಗಳಲ್ಲೂ ಫೀವರ್ ಕ್ಲಿನಿಕ್ ಮಾಡಲಾಗುತ್ತದೆ. ಆಯಾ ಕ್ಷೇತ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಕೂಡ ಆರಂಭವಾಗುತ್ತಿದೆ. ಆಯಾ ವಲಯದಲ್ಲೆ ಬೆಡ್ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ಪಾಸಿಟಿವ್ ಬಂದ ರೋಗಿಗಳನ್ನು ಕ್ವಾರಂಟೈನ್ ಮಾಡಲು ಮನೆಯಲ್ಲಿ ಸಮಸ್ಯೆ. ಆದರೆ, ಸಿಸಿಸಿ ಕೇಂದ್ರಗಳಲ್ಲಿ ಅಥವಾ ಸ್ಥಳೀಯ ಹೋಟೆಲ್ ಬಳಸಿಕೊಳ್ಳಲು ಅವಕಾಶ ಇದೆ ಎಂದರು. ಇದಲ್ಲದೆ ನಗರದಲ್ಲಿ ಕೋವಿಡ್ ಮೃತದೇಹ ಸಾಗಿಸಲು 49 ವಾಹನ ಇದೆ. ಯಾವುದೇ ಕೊರತೆ ಇಲ್ಲ ಎಂದರು.
ಈಗಾಗಲೇ ರಾಜ್ಯ ಸರ್ಕಾರದ ಬಳಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡಲಾಗಿದೆ. ನಗರಕ್ಕೆ 40 ಲಕ್ಷ ಲಸಿಕೆ ಬೇಕಾಗಿವೆ. ಐಸಿಯು ಬೆಡ್ ಸೌಲಭ್ಯ ಹೆಚ್ಚಿಸುವ ಸಲುವಾಗಿ 2 ದಿನದಲ್ಲಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ 10 ವೆಂಟಿಲೇಟರ್ ಕೊಡಲಾಗುತ್ತದೆ.
ನಾಲ್ಕೈದು ದಿನದಲ್ಲಿ ನಗರದ ಕೋವಿಡ್ ಸಮಸ್ಯೆ ಹತೋಟಿಗೆ ತರಲಾಗುವುದು ಎಂದರು. ಶಿವಾಜಿನಗರದಲ್ಲಿ 150 ಹಾಸಿಗೆಗಳ ಚರಕ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು ಎಂದರು. ಪೂರ್ವವಲಯದ ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರದಲ್ಲಿ ಹೆಚ್ಚು ಬಡಜನ ಇರುವುದರಿಂದ ಅಲ್ಲೇ ಹೋಗಿ ಆರ್ಟಿಪಿಸಿಆರ್ ಟೆಸ್ಟ್ ಹೆಚ್ಚು ಮಾಡಿ, ಬೇಗ ರಿಸಲ್ಟ್ ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜನಸಂದಣಿ ನಿಯಂತ್ರಣ ಹೇಗೆ?:ಲಾಕ್ಡೌನ್ ಚಿಂತನೆ ಸರ್ಕಾರ ಮಾಡಿಲ್ಲ. ನಗರದ ಸಮಸ್ಯೆಯ ಅರಿವು ಇದೆ. ತಜ್ಞರ ಸಲಹೆ ಜೊತೆಯಲ್ಲಿ ನಗರದ ನಾನಾ ಇಲಾಖಾ ಮುಖ್ಯಸ್ಥರ ಜೊತೆಗೂ ಚರ್ಚೆ ಮಾಡಬೇಕಿದೆ. ಜನ ದುಡಿದ್ರೆ ಮಾತ್ರವೇ ಊಟ. ಪರಿಸ್ಥಿತಿ ನೋಡಿಕೊಂಡು ಕ್ರಮಕೈಗೊಳ್ಳಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ನಾಲ್ಕೈದು ದಿನದಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತದೆ ಎಂದರು.