ಬೆಂಗಳೂರು :ಬಿಬಿಎಂಪಿ ಚುನಾವಣೆ ವಿಳಂಬವಾಗಲು ಕಾರಣವಾದ ಸರ್ಕಾರಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಬೇಕಿತ್ತು. ಆದರೆ, ಸರ್ಕಾರ ಕೊರೊನಾ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಪರಿಗಣಿಸಿ ನ್ಯಾಯಾಲಯ ಕರುಣೆ ತೋರಿ ದಂಡ ವಿಧಿಸುವ ಆಲೋಚನೆಯನ್ನು ಕೈಬಿಟ್ಟಿದೆ ಎಂದು ಹೈಕೋರ್ಟ್ ಬಿಬಿಎಂಪಿ ಚುನಾವಣೆ ಸಂಬಂಧ ನೀಡಿರುವ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ವಿಳಂಬ ಧೋರಣೆ ಹಾಗೂ ಚುನಾವಣೆ ಮುಂದೂಡಲು ಅನುಸರಿಸಿದ ಕ್ರಮಗಳನ್ನು ಕಟುವಾಗಿ ಟೀಕಿಸಿದೆ.
ಪಾಲಿಕೆಗೆ ಚುನಾವಣೆ ನಡೆಸಲು ಅಗತ್ಯವಿರುವ ಮೀಸಲು ಪಟ್ಟಿ ಹಾಗೂ ವಾರ್ಡ್ ಮರು ವಿಂಗಡಣೆ ಪಟ್ಟಿಯನ್ನು ಒದಗಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗ 2020ರ ಜನವರಿಯಲ್ಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಸಂದರ್ಭ ಸರ್ಕಾರ ಶೀಘ್ರ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ಒದಗಿಸಿಕೊಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಕೋರ್ಟ್ ಕೂಡ ಮೀಸಲು ಮತ್ತು ಮರುವಿಂಗಡಣೆ ಪಟ್ಟಿಯನ್ನು ಶೀಘ್ರ ಒದಗಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಆದರೆ, ಸರ್ಕಾರ ಪಟ್ಟಿಗಳನ್ನು ಒದಗಿಸಿಕೊಡಲು ಸಾಕಷ್ಟು ವಿಳಂಬ ಮಾಡಿ ಜೂನ್ 23ರಂದು ಮರುವಿಂಗಡಣೆ ಅಧಿಸೂಚನೆ ಹೊರಡಿಸಿತ್ತು. ನಿಯಮಗಳ ಪ್ರಕಾರ ಸರ್ಕಾರ ಪಾಲಿಕೆ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಲು ಅಗತ್ಯವಿರುವ ಪಟ್ಟಿಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಪ್ರತಿ ಹಂತದಲ್ಲೂ ವಿಳಂಬ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ.
ಈ ಹಿಂದೆಯೂ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಿಲ್ಲ. ಆ ಮೂಲಕ ಚುನಾವಣಾ ಆಯೋಗದ ಸಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿ ಮಾಡಿದೆ. ಪ್ರತಿ ಬಾರಿಯೂ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರುವಂತಹ ಪರಿಸ್ಥಿತಿ ನಿರ್ಮಿಸಿರುವುದು ನಿಜಕ್ಕೂ ದುರದೃಷ್ಟಕರ.
ಸರ್ಕಾರದ ಇಂತಹ ವಿಳಂಬ ಹಾಗೂ ನಿರ್ಲಕ್ಷ್ಯ ಧೋರಣೆಗೆ ನ್ಯಾಯಾಲಯ ದೊಡ್ಡಮೊತ್ತದ ದಂಡವನ್ನು ವಿಧಿಸಬೇಕಿದೆ. ಆದರೆ, ಲಾಕ್ಡೌನ್ ಬಳಿಕ ಕೊರೊನಾ ನಿರ್ವಹಣೆ ಮಾಡಲಿಕ್ಕೂ ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ಅಂಶವನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಂಡು ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯುತ್ತಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯ ತಿಳಿಸಿದೆ.