ಬೆಂಗಳೂರು :ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮಂಗಳೂರಿನ ಜಿ ಆರ್ ಮೆಡಿಕಲ್ ಕಾಲೇಜಿಗೆ 2022-23ನೇ ಸಾಲಿನ ಎಂಬಿಬಿಎಸ್ ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್ಎಂಸಿ) ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಅಲ್ಲದೆ, 2021-22ನೇ ಸಾಲಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದು ಎಂಬಿಬಿಎಸ್ ಕೋರ್ಸ್ ಮುಂದುವರೆಸುತ್ತಿದ್ದ 150 ಮಂದಿ ವಿದ್ಯಾರ್ಥಿಗಳನ್ನು ರಾಜ್ಯದ ಇತರೆ ಕಾಲೇಜುಗಳಿಗೆ ಸ್ಥಳಾಂತರಿಸಲು ಸೂಚಿಸಿದ್ದ ಎನ್ಎಂಸಿ ನಿರ್ಧಾರವನ್ನು ಎತ್ತಿ ಹಿಡಿದಿದೆ. ಕಾಲೇಜಿಗೆ ಅನುಮತಿ ಮುಂದುವರೆಸುವುದು ಮತ್ತು ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದ ಎನ್ಎಂಸಿ ಹಾಗೂ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ಕುಮಾರ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಎನ್ಎಂಸಿ ಸಿಬ್ಬಂದಿ 2022ರ ಸೆಪ್ಟಂಬರ್ 5 ಮತ್ತು 6ರಂದು ಕಾಲೇಜಿಗೆ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸಂದರ್ಭದಲ್ಲಿ ಶೇ. 71ರಷ್ಟು ಬೋಧಕ ಸಿಬ್ಬಂದಿ ಕೊರತೆ, ಶೇ. 79ರಷ್ಟು ನಿವಾಸಿ ವೈದ್ಯರ (ರೆಸಿಡೆಂಟ್) ಕೊರತೆ, ಶೇ.30 ರಷ್ಟು ಮಾತ್ರ ಹೊರ ರೋಗಿಗಳ ಹಾಜರಾತಿ ಇತ್ತು. ಶೇ. 10ರಷ್ಟು ಮಾತ್ರ ಒಳರೋಗಿಗಳಿದ್ದರು. ಈ ಎಲ್ಲ ಮಾಹಿತಿಯ ಆಧಾರದಲ್ಲಿ ಎನ್ಎಂಸಿ ಕಾಲೇಜಿನ ಅನುಮತಿ ನವೀಕರಿಸಲು ನಿರಾಕರಿಸಿತ್ತು.