ಬೆಂಗಳೂರು:ಹೈಕೋರ್ಟ್ ನೆಲಮಹಡಿಯ ಕಚೇರಿಗಳನ್ನು ಸ್ಥಳಾಂತರಿಸಲು ಜಾಗದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ರಾಜ್ಯ ವಕೀಲರ ಪರಿಷತ್ತು ಕಾರ್ಯ ನಿರ್ವಹಿಸುತ್ತಿರುವ ಹಳೆಯ ಚುನಾವಣಾ ಆಯೋಗದ ಕಟ್ಟಡ ಹಾಗೂ ಕೆಜಿಐಡಿ ಕಟ್ಟಡಗಳನ್ನು ತನಗೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ಸೂಚಿಸಿದೆ.
ಇದೇ ವೇಳೆ ರಾಜ್ಯ ವಕೀಲರ ಪರಿಷತ್ತು ಶಾಸನಾತ್ಮಕ ಸಂಸ್ಥೆ, ಹೈಕೋರ್ಟ್ ಆವರಣದಲ್ಲಿಯೇ ಜಾಗ ಬೇಕೆಂದು ಕೇಳಲಾಗದು. ಬೇರೆ ಯಾವುದೇ ರಾಜ್ಯದ ಹೈಕೋರ್ಟ್ ಆವರಣದಲ್ಲಿ ವಕೀಲರ ಪರಿಷತ್ತಿನ ಕಚೇರಿ ಇಲ್ಲ. ಹೀಗಾಗಿ ರಾಜ್ಯ ವಕೀಲರ ಪರಿಷತ್ತು ತನ್ನ ಕಚೇರಿ ನಿರ್ವಹಣೆಗೆ ತನ್ನದೇ ಸ್ವಂತ ಜಾಗ ನೋಡಿಕೊಳ್ಳಬೇಕು ಎಂದಿದೆ.
ಹೈಕೋರ್ಟ್ ನೆಲಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವಂತೆ ಕೋರಿ ವಕೀಲ ರಮೇಶ್ ಎಲ್.ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾತ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಹೈಕೋರ್ಟ್ಗೆ ಅಗತ್ಯ ಕಚೇರಿ ಸ್ಥಳವನ್ನು ಒದಗಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಕೂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಸ್ ಅಗತ್ಯ ಜಾಗ ಒದಗಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ 4 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.