ಕರ್ನಾಟಕ

karnataka

ಸರ್ಕಾರದ ಗೋಮಾತೆ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತ: ಪ್ರಿಯಾಂಕ್​ ಖರ್ಗೆ ಆರೋಪ

By

Published : Nov 30, 2022, 3:41 PM IST

ಗೋಹತ್ಯೆ ನಿಷೇಧ ಕಾಯ್ದೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಬಿಜೆಪಿ ಅವರಿಗೆ ರಾಜ್ಯದ ಆರ್ಥಿಕ ಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆ ಬಗ್ಗೆ ಅಷ್ಟು ಕಾಳಜಿ ಇಲ್ಲ. ಪಶು ಸಂಗೋಪನಾ ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

priyanka-kharge
ಮಾಜಿ ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಗೋಮಾತೆಯ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಅತ್ಯಂತ ಉತ್ಸಾಹದಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರಿಂದಾಗಿ ರೈತರಿಗೆ, ಜನರಿಗೆ, ಕಾರ್ಮಿಕರಿಗೆ ಹಾಗೂ ಚರ್ಮ ಉದ್ಯಮಕ್ಕೆ ಎಷ್ಟು ಅನುಕೂಲವಾಗಿತ್ತು ಎಂಬುದನ್ನು ಅಧ್ಯಯನ ಮಾಡಿದ್ದಾರಾ?. ಇದೊಂದು ಕ್ರಾಂತಿಕಾರಿ ಬಿಲ್ ಎಂದು ಸಿಎಂ ಹಾಗೂ ಪಶುಸಂಗೋಪನಾ ಸಚಿವರು ಹೇಳಿಕೊಂಡಿದ್ದರು.

ವಿಧೇಯಕ ಕೇವಲ ಘೋಷಣೆಗೆ ಸೀಮಿತ:ಗೋವುಗಳನ್ನು ತಂದು ಪೂಜಿಸಿ ವಿಧೇಯಕಕ್ಕೆ ಚಾಲನೆ ನೀಡಿದ್ದರು. ಆದರೆ ಈ ವಿಧೇಯಕ ಕೇವಲ ಘೋಷಣೆಗೆ ಸೀಮಿತವಾಗಿದೆ. ಬಿಜೆಪಿ ಅವರಿಗೆ ರಾಜ್ಯದ ಆರ್ಥಿಕ ಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆ ಬಗ್ಗೆ ಅಷ್ಟು ಕಾಳಜಿ ಇಲ್ಲ. ಇದನ್ನು ಜಾರಿಗೆ ತಂದು ಕೇಶವ ಕೃಪಾದವರಿಂದ ಬೆನ್ನು ತಟ್ಟಿಸಿಕೊಳ್ಳುವುದು ಇವರ ಆಶಯವಾಗಿದೆ. ವಿಶ್ವದ ಒಟ್ಟು ಚರ್ಮಧ್ಯಮಕ್ಕೆ ಶೇ.13 ರಷ್ಟು ಭಾರತದಲ್ಲಿ ರಫ್ತಾಗುತ್ತದೆ. 5.5 ಬಿಲಿಯನ್ ಡಾಲರ್ ಆದಾಯ ಬರುತ್ತದೆ.

ಮುಚ್ಚುವ ಸ್ಥಿತಿಗೆ ಕೈಗಾರಿಕೆಗಳು:ಚರ್ಮದ ಪಾದರಕ್ಷೆ ಹಾಗೂ ಬ್ಯಾಗ್ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಧರ್ಮದ ರಫ್ತು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಏಕೆ ಕೈಗಾರಿಕೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದವರು.

ಬಹುತೇಕ ಕೈಗಾರಿಕೆ ಮುಚ್ಚುವ ಸ್ಥಿತಿ ತಲುಪಿದೆ. 521 ಕೋಟಿ ರೂಪಾಯಿವರೆಗಿನ ಆದಾಯ 160 ಕೋಟಿ ರೂ.ಗೆ ಇಳಿದಿದೆ. 3.5 ಲಕ್ಷ ಮಂದಿ ನೋಂದಾಯಿತ ಸದಸ್ಯರಿದ್ದಾರೆ. ಇವರೆಲ್ಲ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜ್ಯ ಸಮೀಕ್ಷವಾಗಿದೆ ಎಂದು ಇನ್ವೆಸ್ಟ್ ಕರ್ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಆದರೆ, ಆ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಪಶು ಸಂಗೋಪನಾ ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ರಾಜ್ಯದಲ್ಲಿ ಗೋ ಸಂರಕ್ಷಣೆ, ಗೋಶಾಲೆ ನಿರ್ಮಾಣ, ಮೇವುಗಳ ಪೂರೈಕೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ಅಗತ್ಯ ಮೊತ್ತದ ಅನುದಾನ ಪೂರೈಸುತ್ತಿಲ್ಲ. 5,280 ಕೋಟಿ ರೂ. ಆರ್ಥಿಕ ಕೊರತೆ ಎದುರಾಗುತ್ತಿದೆ.

ಪಶು ವೈದ್ಯರ ನೇಮಕ ಇಲ್ಲ: ಪಶು ಸಂಗೋಪನ ಇಲಾಖೆ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ. ಮಾಹಿತಿ ಕೇಳಿದವರಿಗೆ ಸುಳ್ಳು ಅಂಕಿ - ಅಂಶ ನೀಡಲಾಗುತ್ತದೆ. ಪಶು ವೈದ್ಯರ ನೇಮಕ ಸಹ ಆಗುತ್ತಿಲ್ಲ. ಖಾಲಿ ಇರುವ ವೈದ್ಯರ ಹುದ್ದೆಯನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. 275 ಪಶು ಸಂಜೀವಿನಿ ಆಂಬ್ಯುಲೆನ್ಸ್ ಅನ್ನು ಸರ್ಕಾರ ಖರೀದಿಸಿದೆ. ಆದರೆ, ಇದನ್ನ ಓಡಿಸುವ ಚಾಲಕರು ಇಲ್ಲ. ಯಾವ ಕಾರಣಕ್ಕೆ ಆಂಬ್ಯುಲೆನ್ಸ್​​ಗಳನ್ನು ಖರೀದಿಸಲಾಯಿತು.

ಮೋದಿಗೆ ಪತ್ರ ಬರೆದ ಪಶು ಆಹಾರ ಪೂರೈಕೆ ಸಂಘಟನೆಗಳು:ಈ ಸರ್ಕಾರ ಎಲ್ಲರನ್ನೂ ಲೂಟಿ ಮಾಡುತ್ತಿದ್ದು, ಗೋಮಾತೆ ಹೆಸರಿನಲ್ಲಿಯೂ ಲೂಟಿ ಮಾಡಿದೆ. ರಾಜ್ಯದಿಂದ ಪಶು ಆಹಾರ ಪೂರೈಸುವ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಇದನ್ನು ಅವರು ಗಮನಿಸುತ್ತಿಲ್ಲ. ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿರುವ ಆರೋಪ ಇದೆ.

ಸರ್ಕಾರ ಪುಣ್ಯಕೋಟಿ ದತ್ತು ಯೋಜನೆಯನ್ನು ಆರಂಭಿಸಿದ್ದು, ರಾಜ್ಯಾದ್ಯಂತ ಇರುವ ಗೋಶಾಲೆಗಳಿಗೆ ತೆರಳಿ, ಅಲ್ಲಿರುವ ಗೋವುಗಳ ಅಂಕಿ ಅಂಶ ಮಾಡಬೇಕಿತ್ತು. ಆದರೆ, ಇವರು ಎಷ್ಟು ಗೋಶಾಲೆ ನಿರ್ಮಿಸಿದ್ದಾರೆ ಎಂಬುದನ್ನು ನಾವು ಪ್ರಶ್ನಿಸುತ್ತೇವೆ.

ಸಿಎಂ ಕ್ಷೇತ್ರದಲ್ಲಾಗಲಿ, ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲಿ ಆಗಲಿ ಒಂದೇ ಒಂದು ಗೋಶಾಲೆ ಇಲ್ಲ. ಇಲ್ಲಿನ ಜಾನುವಾರುಗಳ ಅಂಕಿ ಅಂಶ ಸಹ ಆತಂಕ ಮೂಡಿಸುತ್ತಿದೆ. 177 ಗೋಶಾಲೆಗಳಲ್ಲಿ 21,207 ಜಾನುವಾರುಗಳಲ್ಲಿ ಕೇವಲ 151 ಗೋವುಗಳನ್ನು ಮಾತ್ರ ದತ್ತು ಪಡೆಯಲಾಗಿದೆ. ಗೋಮಾತೆಯ ಮೇಲೆ ಪ್ರೀತಿ ವ್ಯಕ್ತಪಡಿಸುವ ಬಿಜೆಪಿಯವರು ಏನಾಗಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯವರೇ ದತ್ತು ಪಡೆಯಿರಿ: ಜನ ಗೋವನ್ನ ದತ್ತು ಸ್ವೀಕರಿಸದ ಹಿನ್ನೆಲೆ ಸರ್ಕಾರಿ ನೌಕರರಿಗೆ ಗೋವನ್ನ ಕೊಂಡುಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಅವರ ವೇತನದಲ್ಲಿ ಹಣ ಕಡಿತ ಮಾಡುವ ಕಾರ್ಯ ಆಗುತ್ತಿದೆ. ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬಿಜೆಪಿಯವರೇ ಯಾಕೆ ನೇರವಾಗಿ ಗೋವನ್ನ ದತ್ತು ಪಡೆಯಬಾರದು.

ನಾಲ್ಕು ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ: ಸರ್ಕಾರಿ ಯೋಜನೆ ಜಾರಿಗೊಳಿಸುವಂತೆ ನೌಕರರ ಮೇಲೆ ಒತ್ತಡ ಹೇರುವ ಅಗತ್ಯ ಏನಿದೆ. ಕಳೆದ ಆರು ತಿಂಗಳಲ್ಲಿ 20 ಲಕ್ಷ ಜಾನುವಾರುಗಳಿಗೆ ಗಂಟು ರೋಗ ಕಾಡಿದೆ. ಆದರೆ, ಇದಕ್ಕೆ ಅಗತ್ಯ ಲಸಿಕೆ ಪೂರೈಕೆ ಆಗಿಲ್ಲ. ಇದರ ಪರಿಣಾಮ ಪ್ರತಿದಿನ ರಾಜ್ಯದಲ್ಲಿ ನಾಲ್ಕು ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ.

2.5 ಲಕ್ಷ ಹುದ್ದೆ ಖಾಲಿ:ಶೇ.20ರಷ್ಟು ಹಾಲು ಉತ್ಪಾದನೆ ಇಳಿಕೆಯಾಗಿದೆ. ಗಂಟು ಚರ್ಮರೋಗದಿಂದಾಗಿ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ಇಲ್ಲವಾಗಿದೆ. ರಾಜ್ಯ ಸರ್ಕಾರದಿಂದಾಗಿ ಕೇಸರಿ ಶಾಲು ಹೊದ್ದು ಓಡಾಡುವ ಬಿಜೆಪಿಯವರಿಗೆ ಮಾತ್ರ ಅನುಕೂಲ ಆಗಿದೆ. ಮೋಹಕ್ಕೆ ನಿಷೇಧ ಕಾಯ್ದೆಯನ್ನು ಗೋವಿನ ಅನುಕೂಲಕ್ಕೆ ತಂದಿಲ್ಲ. ಬದಲಾಗಿ ಮತಗಳಿಕೆ ಉದ್ದೇಶಕ್ಕೆ ತಂದಿದ್ದೀರಿ. ನಿಜವಾದ ಗೋ ಕಾಳಜಿ ಯೋಜನೆ ಜಾರಿ ಹಿಂದೆ ಇಲ್ಲ. 2.5 ಲಕ್ಷ ಹುದ್ದೆ ಖಾಲಿ ಇದ್ದು, ಇದರ ಬರ್ತಿಗೆ ಹಣಕಾಸು ಇಲಾಖೆಯಿಂದ ಅನುದಾನ ಸಿಗುತ್ತಿಲ್ಲ ಎಂಬ ಮಾತು ಸರ್ಕಾರದಿಂದ ಕೇಳಿ ಬರುತ್ತಿದೆ.

ಉದ್ಯೋಗ ಸೃಷ್ಟಿಯಿಂದ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಇದರ ಹೊರತು ಯಾವುದೇ ಪ್ರಯತ್ನದಿಂದಲೂ ರಾಜ್ಯದ ಪ್ರಗತಿ ಅಸಾಧ್ಯ. ಮಸೂದೆ ಮಂಡನೆ ಹಾಗೂ ಕಾನೂನು ಜಾರಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಇದನ್ನು ಓದಿ:ಜೋಕರ್​ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು: ಶಾಸಕ‌ ಯತ್ನಾಳ್​ಗೆ ವಚನಾನಂದ ಶ್ರೀ ಪರೋಕ್ಷ ಟಾಂಗ್​

ABOUT THE AUTHOR

...view details