ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಗೆ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನವಿ ಮಾಡಿದ್ದಾರೆ.
ಹಾಸನ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿ: ಸಿಎಂಗೆ ರೇವಣ್ಣ ಮನವಿ
ಕೊರೊನಾ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆ ಪ್ರತೀ ತಾಲೂಕಿಗೆ ಕೇವಲ 2 ಲಕ್ಷ ಅನುದಾನ ನೀಡಲಾಗಿದೆ. ಈ ಹಣ ಸಾಲುವುದಿಲ್ಲ, ಹಾಗಾಗಿ ಹಾಸನ ಜಿಲ್ಲೆಗೆ ಹೆಚ್ಚುವರಿ ಅನುದಾನ ನೀಡುವಂತೆ ಸಿಎಂಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನವಿ ಮಾಡಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ, ಕೊರೊನಾ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆ ಪ್ರತೀ ತಾಲೂಕಿಗೆ ಕೇವಲ 2 ಲಕ್ಷ ಅನುದಾನ ನೀಡಲಾಗಿದೆ. ಬಡವರು, ನಿರ್ಗತಿಕರಿಗೆ ಒಂದು ದಿನದ ಊಟ ನೀಡಲು ಹಣ ಸಾಲುವುದಿಲ್ಲ, ಹೀಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಎಸ್.ಡಿ.ಆರ್.ಎಫ್ ನಲ್ಲಿರುವ ಅನುದಾನ ಬಳಕೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕು. ಹಾಸನ ಜಿಲ್ಲೆಯಿಂದ ವಲಸೆ ಹೋಗಿದ್ದ ಕಾರ್ಮಿಕರು ವಾಪಸಾಗಿದ್ದಾರೆ, ಜಿಲ್ಲೆಗೆ ವಾಪಸಾದ ಕಾರ್ಮಿಕರಿಗೆ ಪಡಿತರ ಚೀಟಿಗಳಿಲ್ಲ, ಇಂತಹ ಕುಟುಂಬಗಳಿಗೆ ಪಡಿತರ ಒದಗಿಸಬೇಕು. ಹಾಸನ ಮೆಡಿಕಲ್ ಕಾಲೇಜಿಗೆ ಟೆಸ್ಟ್ ಕಿಟ್ ಹಾಗೂ ಪಿಪಿಇ ಕಿಟ್ ಒದಗಿಸಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಪ್ರತಿ ಎಕರೆಗೆ 50ಸಾವಿರ ರೂ. ಪರಿಹಾರ ನೀಡಬೇಕು. ಆಲೂಗಡ್ಡೆ ಬಿತ್ತನೆ ಬೀಜದ ಅವಶ್ಯಕತೆ ಇದೆ, 35,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ, ಬಿತ್ತನೆ ಬೀಜ ಹಾಗೂ ಔಷಧಕ್ಕಾಗಿ 55ಕೋಟಿ ಮೀಸಲಿಡಲು ಸಿಎಂಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.