ಬೆಂಗಳೂರು:ಉಚಿತ ಸೆಟ್ ಟಾಪ್ ಬಾಕ್ಸ್ ವಿರುದ್ಧ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೂರು ಕೊಟ್ಟರೆ ನಾನೂ ದೂರು ಕೊಡುತ್ತೇನೆ, ಇಬ್ಬರೂ ದೂರುಗಳನ್ನು ಕೊಡೋಣ, ಕಾನೂನಿನಡಿ ಯಾರಿಗೆ ಶಿಕ್ಷೆ ಆಗುತ್ತದೆಯೋ ಆಗಲಿ ಎಂದು ಕಾಂಗ್ರೆಸ್ಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.
ಆರ್ಆರ್ ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿರುಸಿನ ಪ್ರಚಾರ ನಡೆಸಿದರು. ಜಾಲಹಳ್ಳಿ ವಾರ್ಡ್ನ ಸಿದ್ಧಾರ್ಥನಗರದಲ್ಲಿ ಕಾಲ್ನಡಿಗೆ ಮೂಲಕ ಪ್ರಚಾರ ನಡೆಸಿದರು. ಈ ವೇಳೆ, ಮಾತನಾಡಿದ ಮುನಿರತ್ನ, ಕೇಬಲ್ ನೆಟವರ್ಕ್ ನನ್ನ ವೃತ್ತಿ ಅವರೂ ಸಹ ವ್ಯಾಪಾರಸ್ಥರು ಅವರೂ ಕೂಡ ಕೇಬಲ್ ವ್ಯಾಪಾರ ಮಾಡ್ತಾರೆ. ನನಗೆ ಅನ್ವಯಿಸುವ ಕಾನೂನು ಅವರಿಗೂ ಅನ್ವಯವಾಗತ್ತದೆ. ರಾಜಕೀಯ ದ್ವೇಷ ಅಸೂಯೆಗಳಿಗೆ ನಾನು ಉತ್ತರ ಕೊಡುವುದಿಲ್ಲ, ನಾನು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ತೀರಾ ಅಂದರೆ ತೀರಾ ಸಣ್ಣವನು ಎಂದು ಡಿಕೆ ಶಿವಕುಮಾರ್ ಆರೋಪಕ್ಕೆ ಟಾಂಗ್ ನೀಡಿದರು.
ಉಚಿತ ಸೆಟ್ ಟಾಪ್ ಬಾಕ್ಸ್ ವಿರುದ್ಧ ದೂರು ಕೊಡುವುದಾಗಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನವರು ದೂರು ಕೊಟ್ರೆ ನಾನೂ ಕೊಡುತ್ತೇನೆ, ನಾನು ಕಾನೂನುಬದ್ಧ ವ್ಯಾಪಾರ ಮಾಡುತ್ತಿದ್ದೇನೆ, ಅದೇ ವಿರೋಧ ಅಂದರೆ ಹೇಗೆ ? ಕೇಬಲ್ ನಡೆಸಲು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಜಿಯೋ, ಡೆನ್, ರಿಲಯನ್ಸ್, ಏರ್ಟೆಲ್, ಟಾಟಾ ಸ್ಕೈ ಇವರೆಲ್ಲರಿಗೂ ಕೇಂದ್ರವೇ ಅನುಮತಿ ಕೊಟ್ಟಿದೆ. ಇವರದ್ದೆಲ್ಲ ತಪ್ಪಾ ಹಾಗಿದ್ದರೆ ? ಎಂದು ಆರೋಪ ಕುರಿತು ಸ್ಪಷ್ಟೀಕರಣ ನೀಡಿದರು.