ಕರ್ನಾಟಕ

karnataka

By

Published : Jan 24, 2021, 7:00 AM IST

ETV Bharat / state

ಸ್ಪೀಕರ್ ಕಡೆಯಿಂದ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ: ಹಣ ಪಡೆದು ದಂಪತಿ ಎಸ್ಕೇಪ್​

ನಾಗರಬಾವಿ ನಿವಾಸಿ ಪ್ರಮಿಳಾ ಅವರ ಮಕ್ಕಳಿಗೆ ಸ್ಪೀಕರ್​ ಕಡೆಯಿಂದ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ, ವಂಚಕ ದಂಪತಿ ಇಬ್ಬರು 10 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಈ ಸಂಬಂಧ ಪ್ರಮೀಳಾ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Fraud
ವಂಚನೆ

ಬೆಂಗಳೂರು:ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಪಡೆದ ದಂಪತಿ ಕೆಲಸವನ್ನೂ ಕೊಡಿಸದೇ, ಹಣವನ್ನೂ ಮರಳಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಗರಬಾವಿ ನಿವಾಸಿ ಪ್ರಮಿಳಾ ನೀಡಿದ ದೂರಿನ ಆಧಾರದ ಮೇರೆಗೆ ಮಂಡ್ಯ ಮೂಲದ ರಾಘವೇಂದ್ರ, ಇವರ ಪತ್ನಿ ಮನು, ಹರೀಶ್ ಮತ್ತು ನವೀನ್ ಎಂಬುವರ ವಿರುದ್ಧ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2017ರಲ್ಲಿ ದೂರುದಾರರಾದ ಪ್ರಮೀಳಾ ಚಂದ್ರಾಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ರಾಘವೇಂದ್ರ ಪತ್ನಿ ಮನು, ಪ್ರಮೀಳಾಗೆ ಪರಿಚಿತರಾಗಿದ್ದರು. 2017ರಲ್ಲಿ ಸರ್ಕಾರದ ನೇರ ನೇಮಕಾತಿ ಹುದ್ದೆಯ ಅಧಿಸೂಚನೆಗೆ ಸಂಬಂಧಿಸಿದ ಗೆಜೆಟ್ ಪತ್ರದ ನಕಲು ಪ್ರತಿಯನ್ನು ಪ್ರಮೀಳಾಗೆ ತೋರಿಸಿದ ಮನು, ನಮ್ಮ ಪತಿ ರಾಘವೇಂದ್ರಗೆ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮ್ಮ ಮಕ್ಕಳಿಗೆ ಸ್ಪೀಕರ್ ಕಡೆಯಿಂದ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿದ್ದರು ಎನ್ನಲಾಗ್ತಿದೆ. ಈಕೆಯ ಮಾತನ್ನು ನಂಬಿದ ಪ್ರಮೀಳಾ ತಮ್ಮ ಮಕ್ಕಳಿಗೆ ಒಳ್ಳೆಯ ಸರ್ಕಾರಿ ಕೆಲಸ ಸಿಗಬಹುದು ಎಂದು ಅವರ ಶೈಕ್ಷಣಿಕ ದಾಖಲಾತಿಯನ್ನು ರಾಘವೇಂದ್ರ ಅವರಿಗೆ ನೀಡಿದ್ದರು. ರಾಘವೇಂದ್ರ ನಕಲು ಅರ್ಜಿ ಭರ್ತಿ ಮಾಡಿಸಿ ಪ್ರಮೀಳಾರಿಂದ 10 ಲಕ್ಷ ರೂ. ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ.

ಓದಿ:ಪ್ರಶ್ನೆ ಪತ್ರಿಕೆ ಸೋರಿಕೆ: ಇಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆ ಮುಂದೂಡಿಕೆ

ಈ ನಡುವೆ ಆರೋಪಿಗಳಾದ ಹರೀಶ್ ಮತ್ತು ನವೀನ್ ಅವರು ಪ್ರಮೀಳಾ ಮನೆಗೆ ಬಂದು ನಾವು ವಿಧಾನಸೌಧ ಸ್ಪೀಕರ್ ಕಚೇರಿಯಿಂದ ಬಂದಿದ್ದೇವೆ ಎಂದು ನಂಬಿಸಿ ಮಕ್ಕಳ ಮಾರ್ಕ್ಸ್‌ ಕಾರ್ಡ್ ಪರಿಶೀಲಿಸಬೇಕು ಎಂದು ಒಟ್ಟು 30 ಸಾವಿರ ರೂ. ಪಡೆದಿದ್ದರು.

ಈ ಬೆಳವಣಿಗೆ ಬಳಿಕ ರಾಘವೇಂದ್ರ ಹಾಗೂ ಇವರ ಪತ್ನಿ ಮನು ಮನೆ ಖಾಲಿ ಮಾಡಿ, ಮೊಬೈಲ್ ಸಂಪರ್ಕಕ್ಕೂ ಸಿಗದೇ ವಂಚಿಸಿದ್ದಾರೆ. 2019ರಲ್ಲಿ ಮೋಸ ಹೋಗಿರುವುದನ್ನು ಅರಿತ ಪ್ರಮೀಳಾ ಚಂದ್ರಾಲೇಔಟ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ರಾಘವೇಂದ್ರ ಅವರನ್ನು ಉಪಪೊಲೀಸ್ ಆಯುಕ್ತರ ಕಚೇರಿಗೆ ಕರೆಸಿ 2 ತಿಂಗಳ ವಾಯಿದೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಹಣ ಹಿಂತಿರುಗಿಸುವಂತೆ ಸೂಚಿಸಿ ಕಳಿಸಲಾಗಿತ್ತು. ಆದರೆ ವಾಯಿದೆ ಮುಗಿದರೂ ರಾಘವೇಂದ್ರ ಅವರು ಹಣವನ್ನೂ ಹಿಂತಿರುಗಿಸದೇ, ಕೆಲಸವನ್ನೂ ಕೊಡಿಸದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಪ್ರಮೀಳಾ ಉಲ್ಲೇಖಿಸಿದ್ದಾರೆ.

ABOUT THE AUTHOR

...view details