ಕರ್ನಾಟಕ

karnataka

ETV Bharat / state

ಎಲ್ಲಾ ಹಂತದ ಅರಣ್ಯಾಧಿಕಾರಿಗಳು ತಿಂಗಳಲ್ಲಿ 15 ದಿನ ಅರಣ್ಯದಲ್ಲಿರಿ: ಸಿಎಂ ತಾಕೀತು

ಅರಣ್ಯಾಧಿಕಾರಿಗಳು 15 ದಿನ ಅರಣ್ಯದಲ್ಲಿ ಇದ್ದರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಹೀಗಾಗಿ 15 ದಿನ ಅರಣ್ಯದಲ್ಲಿ ಇರಿ ಎಂದು ಸಿಎಂ ಬೊಮ್ಮಾಯಿ ಸೂಚಿಸಿದರು.

By

Published : Jun 25, 2022, 7:35 PM IST

forest-officers-should-be-in-forest-for-15-days-a-month-cm-bommai
ಎಲ್ಲಾ ಹಂತದ ಅರಣ್ಯಾಧಿಕಾರಿಗಳು ತಿಂಗಳಲ್ಲಿ 15 ದಿನ ಅರಣ್ಯದಲ್ಲಿರಿ: ಸಿಎಂ ತಾಕೀತು

ಬೆಂಗಳೂರು: ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದೀರಿ. ಕಚೇರಿ ಬಿಟ್ಟು ಹೊರಗೇ ಬರುತ್ತಿಲ್ಲ. ಅರಣ್ಯಕ್ಕೆ ಹೋಗಿ, ತಿಂಗಳಲ್ಲಿ 15 ದಿನ ಅರಣ್ಯದಲ್ಲಿದ್ದರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಹೀಗಾಗಿ 15 ದಿನ ಅರಣ್ಯದಲ್ಲಿ ಇರಿ ಎಂದು ಸಿಎಂ ಬೊಮ್ಮಾಯಿ ಸೂಚನೆ ನೀಡಿದರು.

ಪ್ರಸ್ತುತ ಶೇ. 23ರಷ್ಟಿರುವ ಅರಣ್ಯ ಪ್ರದೇಶವನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ. 30ಕ್ಕೆ ಹೆಚ್ವಿಸಲು ಪ್ರಯತ್ನಿಸಬೇಕು. ನಿಗಮ ಪ್ರಾರಂಭವಾದ ಸಂದರ್ಭದಲ್ಲಿ ಕರ್ನಾಟಕದ ಜನಸಂಖ್ಯೆ ಇಷ್ಟಿರಲಿಲ್ಲ. ಅರಣ್ಯ ಹಾಗೂ ಮನುಷ್ಯನ ಸಂಬಂಧ, ಅರಣ್ಯ ಹಾಗೂ ನಾಗರಿಕತೆಯ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಅರಣ್ಯ ಉತ್ಪಾದನೆಗಳನ್ನು ನಾಗರಿಕರ ಉಪಯೋಗಕ್ಕಾಗಿ ಯಾವ ರೀತಿ ಬಳಸಿಕೊಳ್ಳಬಹುದು, ಆ ರೀತಿಯ ಅರಣ್ಯವನ್ನು ಯಾವ ರೀತಿ ಬೆಳೆಸಬಹುದೆಂಬ ಚಿಂತನೆಯಿಂದ ಇದನ್ನು ಮಾಡಲಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಕಡಿಮೆಯಾಗಿದೆ. ನಮ್ಮ ಮುಂದಿರುವ ಸವಾಲು ಪರಿಸರ ಸಮತೋಲನವಾಗಬೇಕಾದರೆ, ನಮ್ಮ ನಿಸರ್ಗದತ್ತ ಸಂಪತ್ತನ್ನು ಇನ್ನಷ್ಟು ವಿಸ್ತರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದು ಸಿಎಂ ಹೇಳಿದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವ ಸಮಾರಂಭ

ಈ ಬಾರಿಯ ಬಜೆಟ್​​ನಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ರೂಪಿಸಲಾಗಿದೆ. ದೂರದೃಷ್ಟಿ ಇಟ್ಟುಕೊಂಡು ಸುಮಾರು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅರಣ್ಯಗಳ ಸರ್ವೆ ಕೈಗೊಂಡು ನಿರ್ದಿಷ್ಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕು. ಅನುದಾನವಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು ಮಾತ್ರವಲ್ಲ, ಪರಿಸರ ಉಳಿಸುವ, ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ವರ್ಷ ಒದಗಿಸಿರುವ 100 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಸಿದರೆ ಇನ್ನೂ 100 ಕೋಟಿಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ನಿಗಮದ ಆರ್ಥಿಕ ಸಬಲೀಕರಣ:ನಿಗಮ ತನ್ನ ಗುರಿ ಧ್ಯೇಯೋದ್ದೇಶಗಳನ್ನು ಇಂದಿನ ಅವಶ್ಯಕತೆ ಮತ್ತು ಸವಾಲುಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ನಿಗಮವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಸಿದ್ಧವಿದ್ದು, ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ:ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆವುಳ್ಳ ಪ್ರದೇಶವಾಗಿದ್ದು, ಅದನ್ನು ವಿಸ್ತರಣೆ ಮಾಡಬೇಕು. ಅರೆಮಲೆನಾಡು ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕು. 50 ವರ್ಷಗಳ ಸಾಧನೆಯನ್ನು ಮೆಲುಕು ಹಾಕಲು ಹಾಗೂ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಮುಂದಿನ 50 ವರ್ಷಗಳು ಹೇಗಿರಬೇಕೆಂದು ಚಿಂತನೆ ಮಾಡಿ. ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ:ಅಂಜನಾದ್ರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಸೇರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೆ ಸಿಎಂ ಸೂಚನೆ

For All Latest Updates

TAGGED:

ABOUT THE AUTHOR

...view details