ಬೆಂಗಳೂರು: ಕೊರೊನಾ ಸೋಂಕು ಬಂದಿರುವುದು ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರೇ ದೂರವಾಗುತ್ತಿರುವ ಈ ಕೊರೊನಾ ಕಾಲದಲ್ಲಿ ಇಲ್ಲೊಂದು ಆಟೋ ಚಾಲಕರ ತಂಡ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ದು ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡರೂ ಆತಂಕ ಮಾತ್ರ ದೂರವಾಗಿಲ್ಲ. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಸೋಂಕಿತರಿಗೆ ಆಟೋ ಚಾಲಕ ಮೂರ್ತಿ ಎಂಬುವವರು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ಸೋಂಕಿತರ ಜೀವ ರಕ್ಷಣೆಗೆ ಮುಂದಾದ 'ಡಾ. ರಾಜ್ಕುಮಾರ್' ಸೇನೆ ಡಾ. ರಾಜ್ಕುಮಾರ್ ಸೇನೆ ಹೆಸರಿನಲ್ಲಿ ಐದು ಆಟೋಗಳ ಮೂಲಕ ಮೂರ್ತಿ ಹಾಗೂ ಸ್ನೇಹಿತರು ಕೋವಿಡ್ ರೋಗಿಗಳಿಗೆ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಸೀರಿಯಸ್ ಇದ್ದಂತಹ ಸಂದರ್ಭದಲ್ಲಿ ಇವರಿಗೆ ಕರೆ ಮಾಡಿದ್ರೆ, ಆಸ್ಪತ್ರೆ ಎಷ್ಟೇ ದೂರ ಇದ್ದರೂ ಕರೆದುಕೊಂಡು ಹೋಗುತ್ತಾರೆ.
ರೋಗಿಗಳನ್ನ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಸೇರಿಸುವುದರ ಜೊತೆಗೆ ಚಿಕಿತ್ಸೆ ಮುಗಿಸಿ ವಾಪಸಾಗುವವರಿಗೆ ವಾಹನ ಸಿಗದಿದ್ದಲ್ಲಿ ಕರೆ ತರುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ನಗರದಲ್ಲಿ ಆ್ಯಂಬುಲೆನ್ಸ್ ಅಭಾವ ಹೆಚ್ಚಾದ ಹಿನ್ನೆಲೆ ಸಮಾಜ ಸೇವೆಗೆ ಮುಂದಾದ ಮೂರ್ತಿ ಮತ್ತು ಸಂಗಡಿಗರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಉಚಿತ ಆಟೋ ಸೇವೆ ನೀಡಿ ನೆರವಾಗಿದ್ದಾರೆ.
ಓದಿ:ಬೆಡ್ ಲಭ್ಯತೆಯ ರಿಯಾಲಿಟಿ ಚೆಕಿಂಗ್ಗೆ ಅಧಿಕಾರಿಗಳ ನೇಮಕ