ಬೆಂಗಳೂರು:''ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧದ ಕಮಿಷನ್ಗೆ ಬೇಡಿಕೆಯಿಟ್ಟಿರುವ ಆರೋಪ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು'' ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರು ಸಂಪೂರ್ಣ ನಿರಾಶರಾಗಿದ್ದಾರೆ. ಪಾರದರ್ಶಕ ಆಡಳಿತ ಕೊಡುತ್ತೇವೆ ಅಂತಾ ಹೇಳಿದ್ದರು. ಈ ಸರ್ಕಾರದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಎಂದು ಇಬ್ಬರು ಸಿಎಂಗಳಿದ್ದಾರೆ. ಈ ಸರ್ಕಾರ ಎಟಿಎಂಗೆ ಕೂಡ ಹೆಸರುವಾಸಿಯಾಗಿದೆ. ಕಳೆದ ಚುನಾವಣೆಯಲ್ಲಿ ಮಾಡಿದ ಖರ್ಚು ಮತ್ತು ಬರುವ ಚುನಾವಣೆಯ ಖರ್ಚಿಗೆ ರಿಕವರಿ ಮಾಡುತ್ತಿದ್ದಾರೆ. ಅವರು ಸಭೆ ಮಾಡೋದೇ ಇನ್ ಕಮಿಂಗ್ ಟಾರ್ಗೆಟ್ಗಾಗಿ'' ಎಂದು ಟೀಕಿಸಿದರು.
''ರಾಜ್ಯದ ಜನರಿಗೆ ಭಾಗ್ಯ ಕೊಡೋಕೆ ಭ್ರಷ್ಟಾಚಾರ ಗ್ಯಾರಂಟಿಗಳಿಗೂ ನೂರು ಕಂಡಿಷನ್ ಆ ಗ್ಯಾರಂಟಿಗಳ ಕೊಡೋಕೂ ಮಧ್ಯವರ್ತಿಗಳು ಇದರ ಜೊತೆಗೆ ಕೊಲೆಗಳು, ದರೋಡೆ, ಐಎಎಸ್ ಅಧಿಕಾರಿಗಳನ್ನು ಮಹಾಘಟ್ ಬಂಧನಕ್ಕೆ ಗುಮಾಸ್ತರ ರೀತಿ ನಿಯೋಜನೆ ಮಾಡಿದ್ದು, ಇದೇ ಕಾಂಗ್ರೆಸ್ ಸರ್ಕಾರದ ಸಾಧನೆ'' ಎಂದು ವಾಗ್ದಾಳಿ ನಡೆಸಿದರು.
ಕಮಿಷನ್ ಬಾಂಬ್ ಸಿಡಿಸಿದ ಅಶ್ವತ್ಥನಾರಾಯಣ್:''ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರರ ಪರ ಅವಾಗ ಏನು ಕ್ಯಾಂಪೇನಪ್ಪ? ಆಗ ನಿರಾಧಾರ ಆರೋಪಗಳನ್ನು ಮಾಡಿದರು. ಈಗ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಏನು ಅಂತಾ ಅವರ ವ್ಯಕ್ತಿತ್ವದಿಂದಲೇ ಗೊತ್ತಾಗುತ್ತದೆ ಅವರ ಟ್ರ್ಯಾಕ್ ರೆಕಾರ್ಡ್ ಅವರ ವ್ಯಕ್ತಿತ್ವ ತೋರಿಸುತ್ತದೆ. ಇವರು ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವರು ನೈಜತೆ ಬಗ್ಗೆ ಚೆಕ್ ಮಾಡೋಕೆ ಇಷ್ಟು ದಿನ ಬೇಕಾ? ಇಡೀ ಯೋಜನೆ 6,000 ಕೋಟಿ ಇದೆಯೆಲ್ಲ. ಅದಕ್ಕೆ ಕಮಿಷನ್ ಕೂಡಾ ಇವರು ಕೇಳುತ್ತಿದ್ದಾರೆ. 10 ರಿಂದ 15 ಪರ್ಸೆಂಟ್ ಕಮಿಷನ್ ಬಿಲ್ ಪೇಮೆಂಟ್ಗೆ ಕೇಳುತ್ತಿದ್ದಾರೆ. ಕೆಲಸ ಶುರು ಮಾಡೋಕೆ 10 ಪರ್ಸೆಂಟ್ ಕಮಿಷನ್ ಅಂತೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ಅಶ್ವತ್ಥನಾರಾಯಣ್ ಕಮಿಷನ್ ಬಾಂಬ್ ಸಿಡಿಸಿದರು.
''ಗುತ್ತಿಗೆ ಕಾಮಗಾರಿಗಳ ವಿಚಾರದಲ್ಲಿ ಯಾವ ದೂರುಗಳೂ ಬಂದಿಲ್ಲ. ಇವರೇ ಸಚಿವರ ಪತ್ರದ ಮೇಲೆ ತನಿಖೆ ಮಾಡಿಸಿದ್ದಾರೆ. ಆಮೇಲೆ ತಜ್ಞರ ಸಮಿತಿ ಅಂತೆ, ಇದೆಲ್ಲ ಏನ್ರೀ? ಸ್ಪೆಷಲ್ ಕಮಿಷನ್ ಅನುಮೋದನೆ ಆಗಿರೋದನ್ನು ತಡೆಹಿಡಿದರೆ, ಯಾವ ರೀತಿ ಉತ್ತರ ಕೊಡೋದು ಅಂತಾ ಹೇಳುತ್ತಿದ್ದಾರೆ. ಎಲ್ಲೋ ಏನೋ ಚಿಂಚೋಳಿಯಲ್ಲಿ ಆಗಿದೆ. ಇಲ್ಲಿ ರಾಜಕಾರಣಿಗಳು ಎಲ್ಲರನ್ನು ಶಿವಕುಮಾರ್ ಅಂತಾ ಹೇಳೋಕೆ ಆಗುತ್ತದೆಯೇ? ಶಿವಕುಮಾರ್ ಶಿವಕುಮಾರೇ, ಅಶ್ವತ್ಥನಾರಾಯಣ್ ಅಶ್ವತ್ಥನಾರಾಯಣೇ... ಏನೋ ಹೇಳಿ ಹಿಟ್ ಅಂಡ್ ರನ್ ಕೆಲಸ ಮಾಡಬೇಡಿ. ಜನರ ಬದುಕಿನ ಜೀವನದ ಜೊತೆ ನೀವು ಆಟ ಆಡಬೇಡಿ. ಗುತ್ತಿಗೆದಾರರು ಈಗಾಗಲೇ ಸುಸ್ತಾಗಿದ್ದಾರೆ. ಪ್ರಕರಣವನ್ನು ಲೋಕಯುಕ್ತಕ್ಕೆ ತನಿಖೆಗೆ ವಹಿಸಬೇಕು. ಸೋಮವಾರ ನಾವು ರಾಜ್ಯಪಾಲರ ಭೇಟಿ ಮಾಡಿ ಈ ಸಂಬಂಧ ಒತ್ತಾಯ ಮಾಡುತ್ತೇವೆ. ನಾವು ಪ್ರಾಮಾಣಿಕ ಅಂತಾ ಸಿಎಂ ಹೇಳುತ್ತಾರೆ. ನಿಮಗೆ ಕಿಂಚತ್ತು ಕಾಳಜಿ ಇದ್ದರೆ ಲೋಕಯುಕ್ತಕ್ಕೆ ವಹಿಸಿ'' ಎಂದು ಆಗ್ರಹಿಸಿದರು.