ಕರ್ನಾಟಕ

karnataka

ETV Bharat / state

ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಕಮಿಷನ್​ ಪ್ರಕರಣ ಲೋಕಾಯುಕ್ತಕ್ಕೆ ಕೊಡಿ: ಅಶ್ವತ್ಥನಾರಾಯಣ್

''ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಇರುವ ಕಮಿಷನ್​ ಆರೋಪದ ಪ್ರಕರಣ ಲೋಕಾಯುಕ್ತಕ್ಕೆ ವಹಿಸಬೇಕು'' ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಒತ್ತಾಯಿಸಿದರು.

By

Published : Aug 11, 2023, 5:35 PM IST

Ashwathtanarayan
ಡಿ.ಕೆ. ಶಿವಕುಮಾರ್, ಚಲುವರಾಯಸ್ವಾಮಿ ಕಮೀಷನ್​ ಪ್ರಕರಣ ಲೋಕಾಯುಕ್ತಕ್ಕೆ ಕೊಡಿ: ಅಶ್ವತ್ಥನಾರಾಯಣ್ ಆಗ್ರಹ

ಬೆಂಗಳೂರು:''ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧದ ಕಮಿಷನ್​ಗೆ ಬೇಡಿಕೆಯಿಟ್ಟಿರುವ ಆರೋಪ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು'' ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರು ಸಂಪೂರ್ಣ ನಿರಾಶರಾಗಿದ್ದಾರೆ. ಪಾರದರ್ಶಕ ಆಡಳಿತ ಕೊಡುತ್ತೇವೆ ಅಂತಾ ಹೇಳಿದ್ದರು. ಈ ಸರ್ಕಾರದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಎಂದು ಇಬ್ಬರು ಸಿಎಂಗಳಿದ್ದಾರೆ. ಈ ಸರ್ಕಾರ ಎಟಿಎಂಗೆ ಕೂಡ ಹೆಸರುವಾಸಿಯಾಗಿದೆ. ಕಳೆದ ಚುನಾವಣೆಯಲ್ಲಿ ಮಾಡಿದ ಖರ್ಚು ಮತ್ತು ಬರುವ ಚುನಾವಣೆಯ ಖರ್ಚಿಗೆ ರಿಕವರಿ ಮಾಡುತ್ತಿದ್ದಾರೆ. ಅವರು ಸಭೆ ಮಾಡೋದೇ ಇನ್ ಕಮಿಂಗ್ ಟಾರ್ಗೆಟ್​ಗಾಗಿ'' ಎಂದು ಟೀಕಿಸಿದರು.

''ರಾಜ್ಯದ ಜನರಿಗೆ ಭಾಗ್ಯ ಕೊಡೋಕೆ ಭ್ರಷ್ಟಾಚಾರ ಗ್ಯಾರಂಟಿಗಳಿಗೂ ನೂರು ಕಂಡಿಷನ್ ಆ ಗ್ಯಾರಂಟಿಗಳ ಕೊಡೋಕೂ ಮಧ್ಯವರ್ತಿಗಳು ಇದರ ಜೊತೆಗೆ ಕೊಲೆಗಳು, ದರೋಡೆ, ಐಎಎಸ್ ಅಧಿಕಾರಿಗಳನ್ನು ಮಹಾಘಟ್ ಬಂಧನಕ್ಕೆ ಗುಮಾಸ್ತರ ರೀತಿ ನಿಯೋಜನೆ ಮಾಡಿದ್ದು, ಇದೇ ಕಾಂಗ್ರೆಸ್ ಸರ್ಕಾರದ ಸಾಧನೆ'' ಎಂದು ವಾಗ್ದಾಳಿ ನಡೆಸಿದರು.

ಕಮಿಷನ್ ಬಾಂಬ್ ಸಿಡಿಸಿದ ಅಶ್ವತ್ಥನಾರಾಯಣ್:''ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರರ ಪರ ಅವಾಗ ಏನು ಕ್ಯಾಂಪೇನಪ್ಪ? ಆಗ‌ ನಿರಾಧಾರ ಆರೋಪಗಳನ್ನು ಮಾಡಿದರು. ಈಗ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಏನು ಅಂತಾ ಅವರ ವ್ಯಕ್ತಿತ್ವದಿಂದಲೇ ಗೊತ್ತಾಗುತ್ತದೆ ಅವರ ಟ್ರ್ಯಾಕ್ ರೆಕಾರ್ಡ್ ಅವರ ವ್ಯಕ್ತಿತ್ವ ತೋರಿಸುತ್ತದೆ. ಇವರು ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವರು ನೈಜತೆ ಬಗ್ಗೆ ಚೆಕ್ ಮಾಡೋಕೆ ಇಷ್ಟು ದಿನ ಬೇಕಾ? ಇಡೀ ಯೋಜನೆ 6,000 ಕೋಟಿ ಇದೆಯೆಲ್ಲ. ಅದಕ್ಕೆ ಕಮಿಷನ್ ಕೂಡಾ ಇವರು ಕೇಳುತ್ತಿದ್ದಾರೆ. 10 ರಿಂದ‌ 15 ಪರ್ಸೆಂಟ್ ಕಮಿಷನ್ ಬಿಲ್ ಪೇಮೆಂಟ್​ಗೆ ಕೇಳುತ್ತಿದ್ದಾರೆ. ಕೆಲಸ ಶುರು ಮಾಡೋಕೆ 10 ಪರ್ಸೆಂಟ್ ಕಮಿಷನ್ ಅಂತೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ಅಶ್ವತ್ಥನಾರಾಯಣ್ ಕಮಿಷನ್ ಬಾಂಬ್ ಸಿಡಿಸಿದರು.

''ಗುತ್ತಿಗೆ ಕಾಮಗಾರಿಗಳ ವಿಚಾರದಲ್ಲಿ ಯಾವ ದೂರುಗಳೂ ಬಂದಿಲ್ಲ. ಇವರೇ ಸಚಿವರ ಪತ್ರದ ಮೇಲೆ ತನಿಖೆ ಮಾಡಿಸಿದ್ದಾರೆ. ಆಮೇಲೆ ತಜ್ಞರ ಸಮಿತಿ ಅಂತೆ, ಇದೆಲ್ಲ ಏನ್ರೀ? ಸ್ಪೆಷಲ್ ಕಮಿಷನ್ ಅನುಮೋದನೆ ಆಗಿರೋದನ್ನು ತಡೆಹಿಡಿದರೆ, ಯಾವ ರೀತಿ ಉತ್ತರ ಕೊಡೋದು ಅಂತಾ ಹೇಳುತ್ತಿದ್ದಾರೆ. ಎಲ್ಲೋ ಏನೋ ಚಿಂಚೋಳಿಯಲ್ಲಿ ಆಗಿದೆ. ಇಲ್ಲಿ ರಾಜಕಾರಣಿಗಳು ಎಲ್ಲರನ್ನು ಶಿವಕುಮಾರ್ ಅಂತಾ ಹೇಳೋಕೆ ಆಗುತ್ತದೆಯೇ? ಶಿವಕುಮಾರ್ ಶಿವಕುಮಾರೇ, ಅಶ್ವತ್ಥನಾರಾಯಣ್ ಅಶ್ವತ್ಥನಾರಾಯಣೇ... ಏನೋ ಹೇಳಿ ಹಿಟ್ ಅಂಡ್ ರನ್ ಕೆಲಸ ಮಾಡಬೇಡಿ. ಜನರ ಬದುಕಿನ ಜೀವನದ ಜೊತೆ ನೀವು ಆಟ ಆಡಬೇಡಿ. ಗುತ್ತಿಗೆದಾರರು ಈಗಾಗಲೇ ಸುಸ್ತಾಗಿದ್ದಾರೆ. ಪ್ರಕರಣವನ್ನು ಲೋಕಯುಕ್ತಕ್ಕೆ ತನಿಖೆಗೆ ವಹಿಸಬೇಕು. ಸೋಮವಾರ ನಾವು ರಾಜ್ಯಪಾಲರ ಭೇಟಿ ಮಾಡಿ ಈ ಸಂಬಂಧ ಒತ್ತಾಯ ಮಾಡುತ್ತೇವೆ. ನಾವು ಪ್ರಾಮಾಣಿಕ ಅಂತಾ ಸಿಎಂ ಹೇಳುತ್ತಾರೆ. ನಿಮಗೆ ಕಿಂಚತ್ತು ಕಾಳಜಿ ಇದ್ದರೆ ಲೋಕಯುಕ್ತಕ್ಕೆ ವಹಿಸಿ'' ಎಂದು ಆಗ್ರಹಿಸಿದರು.

ಎರಡು ಕೇಸ್​ಗಳ​ನ್ನು ಲೋಕಯುಕ್ತಕ್ಕೆ ನೀಡಿ:''ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ಬಂದಿದೆ. ಅವರ ಬಗ್ಗೆ ಪೇ ಸಿಎಸ್ ಎಂದು ಅಭಿಯಾನ ನಡೆಯುತ್ತಿದೆ. ಇವತ್ತು ಎಲ್ಲ ಕಡೆಯೂ ಪೇಗಳದ್ದೇ ಜಾಸ್ತಿ ಆಗಿ ಹೋಗಿದೆ. ಇದರ ಬಗ್ಗೆ ಸಿಎಂ ಈಗಾಗಲೇ ಫೇಕ್ ಲೆಟರ್ ಎಂದಿದ್ದಾರೆ. ಸಿಎಂ ಈ ರೀತಿ ಹೇಳಿ ಸಿಐಡಿಗೆ ಹೋದರೆ ಇದರಲ್ಲಿ ನ್ಯಾಯ ಸಿಗುತ್ತಾ? ಈ ಎರಡು ಕೇಸ್​ನ್ನು ಲೋಕಯುಕ್ತಕ್ಕೆ ತನಿಖೆ ಮಾಡಬೇಕು. ಅಲ್ಲಿವರೆಗೂ ಚಲುವರಾಯಸ್ವಾಮಿ ಮತ್ತು ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು. ತಕ್ಷಣ ಇವರನ್ನು ವಜಾ ಮಾಡಬೇಕು'' ಎಂದು ಒತ್ತಾಯಿಸಿದರು.

''ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಆಪಾದನೆ ಬಂದಿದೆ, ಡಿಸಿಎಂ ಮೇಲೆ ಬಂದಿರುವ ಆಪಾದನೆಯನ್ನು ಮೊದಲು ತನಿಖೆ ಮಾಡಿಸಿ ಮುಖ್ಯಮಂತ್ರಿಗಳೇ. ಈವರೆಗೆ ತನಿಖೆ ಮಾಡಿರೋರನ್ನು ನಾವು ಏನು ತಡೆದಿದ್ದೀವಾ? ಚಲುವರಾಯಸ್ವಾಮಿ, ಡಿ.ಕೆ.ಶಿವಕುಮಾರ್ ಮೇಲೆ ಆಪಾದನೆ ಬಂದಿದೆ. ಲೋಕಯುಕ್ತದಲ್ಲಿ ತನಿಖೆ ಆಗಲಿ, ಅದನ್ನು ಲೋಕಾಯುಕ್ತ ತನಿಖೆಗೆ ಕೊಡಿ'' ಎಂದು ಆಗ್ರಹಿಸಿದರು.

ಅಜ್ಜಯ್ಯನ ಬಳಿ ಹೋಗಿ ಪ್ರಮಾಣ ಮಾಡಿ:''ನಿಮಗೆ ತಾಕತ್ತು ಇದ್ದರೆ, ಅಜ್ಜಯ್ಯನ ಬಳಿ ಹೋಗಿ ಪ್ರಮಾಣ ಮಾಡಿ. ಇವರು ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗ್ತಾರಲ್ಲ, ಈಗ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡಿ. ಡಿ.ಕೆ. ಶಿವಕುಮಾರ್, ಚಲುವರಾಯಸ್ವಾಮಿ ಮೇಲೆ ಲೋಕಾಯುಕ್ತ ತನಿಖೆ ಆಗಲೇಬೇಕು. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಿಪಕ್ಷವಾಗಿ ಹೋರಾಟ ಮಾಡಲಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್ ಸೇರಿ ಎಲ್ಲರೂ ಇದ್ದಾರೆ. ಇವರ ನಾಯಕತ್ವದಲ್ಲಿ ಹೋರಾಟ ಮಾಡುತ್ತೇವೆ'' ಎಂದರು.

ಎಟಿಎಂ ಸರ್ಕಾರ ಎನ್ನುವ ಪೋಸ್ಟರ್ ಸಿದ್ಧ:ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ಹೋರಾಟಕ್ಕೆ ಮುಂದಾಗಿರುವ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಸರ್ಕಾರ ಎಂದು ಪ್ರಚಾರ ಮಾಡಲು ತಂತ್ರ ರೂಪಿಸಿದೆ. ಕಾಂಗ್ರೆಸ್ ಎಟಿಎಂ ಎಂಬ ಪೋಸ್ಟರ್ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಪೋಸ್ಟರ್​ನಲ್ಲಿ ಎಟಿಎಂಗೆ ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಕೈಯಿಂದ ಹಣ ಹಾಕುತ್ತಿರುವ ಹಾಗೂ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸುರ್ಜೇವಾಲ ವಿರುವ ಫೋಟೋ ಪೋಸ್ಟರ್​ಗಳನ್ನು ಸಿದ್ದಪಡಿಸಲಾಗಿದ್ದು, ಇವುಗಳನ್ನು ಪ್ರದರ್ಶಿಸಿ ಸುದ್ದಿಗೋಷ್ಠಿ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಇವುಗಳ ಬಳಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ:Priyank Kharge: ದೇವಸ್ಥಾನ ಯಾಕೆ, ಸಾಕ್ಷಿಸಮೇತ ನ್ಯಾಯಾಲಯಕ್ಕೆ ಬನ್ನಿ- ಸಚಿವ ಪ್ರಿಯಾಂಕ್​ ಖರ್ಗೆ

ABOUT THE AUTHOR

...view details