ಕರ್ನಾಟಕ

karnataka

ETV Bharat / state

ಡಿಜೆಹಳ್ಳಿ ಗಲಭೆ ಪ್ರಕರಣ.. ಎನ್ಐಎ ತನಿಖೆಗೆ ಸಹಕಾರ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ವಿಚಾರಣಾ ಆಯೋಗಗಳ ಕಾಯ್ದೆ-1952ರ ಸೆಕ್ಷನ್ 11ರ ಅಡಿ ಲಭ್ಯವಿರುವಂತೆ ಕ್ಲೇಮು ಕಮಿಷನರ್ ಅವರಿಗೆ ದಾಖಲೆಗಳನ್ನು ತರಿಸಿಕೊಳ್ಳಲು, ಸಮನ್ಸ್ ಜಾರಿ ಮಾಡಲು ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿತು..

By

Published : Sep 29, 2020, 4:53 PM IST

High Court
ಹೈಕೋರ್ಟ್

ಬೆಂಗಳೂರು :ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿ ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದೆ.

ಎನ್ಐಎ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಡಿಜೆಹಳ್ಳಿ ಗಲಭೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಮತ್ತು ಘಟನೆಯಲ್ಲಿ ಆಗಿರುವ ನಷ್ಟ ವಸೂಲಿ ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ಯುಎಪಿಎ ಕಾಯ್ದೆ ಅಡಿ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು (ಅಪರಾಧ ಸಂಖ್ಯೆ 195 ಮತ್ತು 219) ಎನ್ಐಎ ತನಿಖೆಗೆ ವಹಿಸಲಾಗಿದೆ ಎಂಬ ಕೇಂದ್ರದ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ, ಎನ್ಐಎ ಅಧಿಕಾರಿಗಳಿಗೆ ಅಗತ್ಯದ ದಾಖಲೆಗಳು ಹಾಗೂ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಬೇಕು. ತನಿಖೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಬೇಕು ಎಂದು ನಿರ್ದೇಶಿಸಿತು.

ಹಾಗೆಯೇ, ಎನ್ಐಎ ಕೈಗೊಂಡ ತನಿಖೆಯ ವರದಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಗಲಭೆಯಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿ ನಷ್ಟದ ಹೊಣೆಗಾರಿಕೆಯನ್ನು ನಿಗದಿಪಡಿಸಲು ಹಾಗೂ ನಷ್ಟ ಪರಿಹಾರ ನೀಡಲು ರಾಜ್ಯ ಸರ್ಕಾರ ನೇಮಿಸಿರುವ ಕ್ಲೇಮು ಕಮಿಷನರ್ ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು.

ವಿಚಾರಣಾ ಆಯೋಗಗಳ ಕಾಯ್ದೆ-1952ರ ಸೆಕ್ಷನ್ 11ರ ಅಡಿ ಲಭ್ಯವಿರುವಂತೆ ಕ್ಲೇಮು ಕಮಿಷನರ್ ಅವರಿಗೆ ದಾಖಲೆಗಳನ್ನು ತರಿಸಿಕೊಳ್ಳಲು, ಸಮನ್ಸ್ ಜಾರಿ ಮಾಡಲು ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿತು.

ABOUT THE AUTHOR

...view details