ಬೆಂಗಳೂರು: ಕನಸು ಕಾಣುವವರಿಗೆ, ಕನಸಿನಲ್ಲಿ ಸಂತೋಷಪಡುತ್ತೇವೆ ಎನ್ನುವವರಿಗೆ ಬೇಡ ಅನ್ನಲು ಸಾಧ್ಯವೇ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಪ್ರಯತ್ನವನ್ನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಟೀಕಿಸಿದರು.
ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಕೃಷ್ಣ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭ ಕೋರಿದರು. ರಾಜಕೀಯ ಗುರುವಿನ ಕಾಲಿಗೆರಗಿ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಅರ್ಧ ಗಂಟೆಗೂ ಹೆಚ್ಚಿನ ಕಾಲ ಖಾಸಗಿಯಾಗಿ ಚರ್ಚೆ ನಡೆಸಿದರು. ನಂತರ ಮನೆಯ ಗೇಟ್ವರೆಗೂ ಬಂದ ಕೃಷ್ಣ ಡಿ.ಕೆ ಶಿವಕುಮಾರ್ ಅವರನ್ನು ಬೀಳ್ಕೊಟ್ಟರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ಅವರು, ಎಸ್.ಎಂ. ಕೃಷ್ಣ ನನ್ನ ತಂದೆಯ ಸಮಾನ. ಅವರ ಬರ್ತಡೇಗೆ ಶುಭಾಶಯ ಕೋರಲು ಬಂದಿದ್ದೇನೆ. ಮೊನ್ನೆ ಹಬ್ಬದ ಸಂದರ್ಭದಲ್ಲೂ ಬಂದಿದ್ದೆ, ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ಇಲ್ಲ. ನಮ್ಮದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನೇ ಮಾತನಾಡುವುದಿದ್ದರೂ ಬಹಿರಂಗವಾಗೇ ಮಾತನಾಡುತ್ತೇನೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.
ರಾಜಕೀಯ ಗುರಿ ಎಸ್.ಎಂ ಕೃಷ್ಣಗೆ ಬರ್ತಡೇ ಶುಭಾಶಯ ಕೋರಿದ ಸಚಿವ ಡಿಕೆಶಿ ಇನ್ನು ಜಿ.ಟಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ, ಸಚಿವ. ನನ್ನ ಬಗ್ಗೆ ಮಾತ್ರ ನಾನು ಪ್ರತಿಕ್ರಿಯೆ ನೀಡಬಲ್ಲೆ. ಬೇರೆಯವರ ವಿಷಯಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲಿಸಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದರು.