ಬೆಂಗಳೂರು:ಅಲಿಘಡ ವಿವಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮತ್ತು ಮಂಗಳೂರು ಗಲಾಟೆಗೆ ಕಾಂಗ್ರೆಸ್ ನೇರ ಕಾರಣ. ಅವರು ಸುಮ್ಮನಿದ್ದರೆ ಅನಾಹುತಗಳೇ ಆಗುತ್ತಿರಲಿಲ್ಲ. ಪೊಲೀಸರ ಮೇಲೆ ಹಲ್ಲೆ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಕಾಂಗ್ರೆಸ್ ಕಾರಣ. ಹಾಗಾಗಿ ಇದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ಬಿಜೆಪಿ ತಂದಿಲ್ಲ. ನೆಹರು ತಂದಿದ್ದು, ರಾಜೀವ್ ಗಾಂಧಿ ಮೊದಲ ಬಾರಿ ತಿದ್ದುಪಡಿ ಮಾಡಿದ್ದರು. ಒಟ್ಟು ನಾಲ್ಕು ಬಾರಿ ತಿದ್ದುಪಡಿಯಾಗಿದೆ. ಅಟಲ್ ಸರ್ಕಾರದ ವೇಳೆ ಮನಮೋಹನ್ ಸಿಂಗ್ ಬಾಂಗ್ಲಾ ಅಲ್ಪಸಂಖ್ಯಾತರಿರಗೆ ಪೌರತ್ವ ಕೊಡುವ ಬೇಡಿಕೆ ಇರಿಸಿದ್ದರು. ಈ ಕಾಯ್ದೆಯ ಸಿಂಹಪಾಲು ಕೆಲಸ ಕಾಂಗ್ರೆಸ್ ಸರ್ಕಾರವೇ ಮಾಡಿದೆ. 1985ರಲ್ಲಿ ರಾಜೀವ್ ಗಾಂಧಿ ತಂದಿದ್ದ ವಿಧೇಯಕಕ್ಕೆ ನೀವೇ ವಿರೋಧ ಮಾಡುತ್ತಿದ್ದೀರಿ, ನಿಮ್ಮ ಪತಿ ನಿರ್ಧಾರವನ್ನ ನೀವೇ ವಿರೋಧಿಸುತ್ತಿದ್ದೀರಲ್ಲವೇ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದರು.