ಬೆಂಗಳೂರು : ಭಾರಿ ಗಾತ್ರದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ರೈಲ್ವೆ ಪ್ರತಿಬಂಧಕಕ್ಕೆ ತಾಗಿದ ಪರಿಣಾಮ ಕಬ್ಬಿಣದ ಪ್ರತಿಬಂಧಕ ರಸ್ತೆಗೆ ಬಿದ್ದಿರುವ ಘಟನೆ ಇಂದು ಬೆಳಗ್ಗೆ ಆನಂದರಾವ್ ಸರ್ಕಲ್ ಸಮೀಪದ ವಿವಿ ಗಿರಿ ಕಾಲೋನಿ ಬಳಿ ನಡೆದಿದೆ. ಶೇಷಾದ್ರಿಪುರಂ ಸಮೀಪದ ವಿವಿ ಗಿರಿ ಕಾಲೋನಿ ಸಮೀಪ ರೈಲ್ವೇ ಮೇಲ್ಸೇತುವೆಯ ಕೆಳಗಿನ ಮಾರ್ಗದಲ್ಲಿ ಬೃಹತ್ ವಾಹನಗಳ ಸಂಚಾರ ತಡೆಗೆ ಪ್ರತಿಬಂಧಕ ಹಾಕಲಾಗಿತ್ತು. ಶೇಷಾದ್ರಿಪುರಂನಿಂದ ಗಾಂಧಿನಗರ ಮಾರ್ಗದಲ್ಲಿ ಸಾಗುತ್ತಿದ್ದ ಬೃಹತ್ ಗಾತ್ರದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ತಾಗಿದ್ದು ಪ್ರತಿಬಂಧಕ ರಸ್ತೆಗೆ ಉರುಳಿದೆ.
ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಶೇಷಾದ್ರಿಪುರಂ ಕಡೆಯಿಂದ ಗಾಂಧಿನಗರಕ್ಕೆ ತೆರಳುವ ಮಾರ್ಗದಲ್ಲಿ ಕೆಲಕಾಲ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಸ್ಥಳಕ್ಕೆ ಹೈಗ್ರೌಂಡ್ ಟ್ರಾಫಿಕ್ ಪೊಲೀಸರು ಆಗಮಿಸಿ ಪ್ರತಿಬಂಧಕ ತೆರವುಗೊಳಿಸಿದ್ದಾರೆ.
ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವು: ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಹಳೆಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕಾರಿನಲ್ಲಿ ಮೊದಲು ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರು ಕಾರಿನ ಬಳಿಗೆ ಬಂದು ನೋಡಿದ್ದು, ವ್ಯಕ್ತಿಯೊಬ್ಬ ಕಾರಿನೊಳಗೆ ಇರುವುದು ಪತ್ತೆಯಾಗಿದೆ. ಈ ವೇಳೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.