ಬೆಂಗಳೂರು/ಬೆಳಗಾವಿ: ಸಂಪುಟ ಸೇರ್ಪಡೆ ವಿಚಾರವಾಗಿ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ವರದಿ ಬಂದ ಬಳಿಕ ಕ್ರಮ:ಮೀಸಲಾತಿ ಸಂಬಂಧ ತುರ್ತಾಗಿ ವರದಿ ಮಂಡಿಸುವಂತೆ ಸರ್ಕಾರ, ಕಾಯಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದೆ. ಆ ವರದಿ ಮಂಡಿಸಿದ ತಕ್ಷಣ ಕಾನೂನಾತ್ಮಕ ಏನು ಮಾಡಬಹುದೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.