ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ.. ಶಾಸಕರಿಂದ ಮಾಹಿತಿ ಸಂಗ್ರಹ ಆರಂಭಿಸಿದ ಎಐಸಿಸಿ ವೀಕ್ಷಕರು

ಬೆಂಗಳೂರಿನಲ್ಲಿ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ.

By

Published : May 14, 2023, 7:53 PM IST

Updated : May 14, 2023, 8:52 PM IST

congress-clp-meeting-at-bengaluru
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ : ಶಾಸಕರಿಂದ ಮಾಹಿತಿ ಸಂಗ್ರಹ ಆರಂಭಿಸಿದ ಎಐಸಿಸಿ ವೀಕ್ಷಕರು

ಬೆಂಗಳೂರಿನಲ್ಲಿ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆರಂಭವಾಗಿದೆ. ರಾಜ್ಯಕ್ಕೆ ಆಗಮಿಸಿರುವ ಮೂವರು ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಸಭೆ ಆರಂಭವಾಗಿದ್ದು, ಸಭೆಯಲ್ಲಿರುವ ಪ್ರತಿಯೊಬ್ಬ ಶಾಸಕರ ಬಳಿಯೂ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನ ಗಳಿಸಿ ಬಹುಮತ ಪಡೆದಿದ್ದು, ಸರ್ಕಾರ ರಚನೆಯ ಅಂತಿಮ ಹಂತದ ಕಸರತ್ತು ನಡೆಸಿದೆ. ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಎಐಸಿಸಿಯಿಂದ ವೀಕ್ಷಕರಾಗಿ ಸುಶೀಲ್ ಕುಮಾರ್ ಸಿಂಧೆ, ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾ ಆಗಮಿಸಿದ್ದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಎಂ ಬಿ ಪಾಟೀಲ್, ಹೆಚ್‌.ಕೆ ಪಾಟೀಲ್, ಆರ್. ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಪೈಪೋಟಿ ನಡೆಸಿದ್ದಾರೆ. ಇವರಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಂಚೂಣಿಯಲ್ಲಿದ್ದು ಇವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೇ 17ರವರೆಗೆ ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ಸಮಯಾವಕಾಶ ಇದ್ದು ಇಂದು ನೂತನ ಕಾಂಗ್ರೆಸ್ ಶಾಸಕರ ಜೊತೆ ಅಭಿಪ್ರಾಯ ಸಂಗ್ರಹಿಸುವ ವೀಕ್ಷಕರು ಈ ಕಾರ್ಯವನ್ನು ಅಗತ್ಯ ಬಿದ್ದರೆ ನಾಳೆಯೂ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರು ನಗರದ ಸುತ್ತಲಿನ ವಿಧಾನಸಭಾ ಕ್ಷೇತ್ರದ ಶಾಸಕರು ಬಹುಬೇಗ ತಲುಪುತ್ತಿದ್ದು ದೂರದ ವಿಧಾನಸಭಾ ಸದಸ್ಯರು ಆಗಮಿಸುವುದು ವಿಳಂಬವಾಗುತ್ತಿದೆ. ಇಂದು ರಾತ್ರಿಯ ಒಳಗೆ ಎಲ್ಲಾ ಶಾಸಕರು ಬೆಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಅದೇ ಪ್ರಕಾರ ಕಾರ್ಯನಿರ್ವಹಣೆ ಆಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮನದ ನಂತರ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಇದೀಗ ಮುಖ್ಯಮಂತ್ರಿ ಆಯ್ಕೆಯಲ್ಲಿ ಒಂದಿಷ್ಟು ಸವಾಲನ್ನು ಎದುರಿಸುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಆರ್ಥಿಕ ಸಹಕಾರ ಹಾಗೂ ಪರಿಶ್ರಮ ಹಾಕಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಹಜವಾಗಿ ಸಿಎಂ ಆಕಾಂಕ್ಷಿ ಆಗಿದ್ದಾರೆ. ಇನ್ನು ಇವರಲ್ಲದೆ ಹೆಚ್ಚು ಶಾಸಕರ ಒಲವು ಹೊಂದಿರುವ ಸಿದ್ದರಾಮಯ್ಯ ಮತ್ತೋರ್ವ ಪ್ರಬಲ ಆಕಾಂಕ್ಷಿ. ಇವರಲ್ಲದೇ ವಿವಿಧ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು, ಈ ಸಮುದಾಯಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಡವನ್ನು ಸಹ ಹಲವರು ಮುಂದೆ ಇಟ್ಟಿದ್ದಾರೆ.

ಇಂದು ರಾತ್ರಿಯವರೆಗೂ ಶಾಸಕಾಂಗ ಸಭೆ ಮುಂದುವರೆಯಲಿದ್ದು ಅಗತ್ಯ ಬಿದ್ದರೆ ನಾಳೆಯೂ ತಮ್ಮ ಅಭಿಪ್ರಾಯ ಸಂಗ್ರಹಣೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಇದೆ. ಈಗಿರುವ ಲಭ್ಯ ಮಾಹಿತಿ ಪ್ರಕಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಗಾದಿಗೆ ಅತ್ಯಂತ ಸಮೀಪದಲ್ಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನವೊಲಿಕೆ ಯತ್ನಕ್ಕೆ ಹೈಕಮಾಂಡ್ ಪ್ರಯತ್ನ ನಡೆಸಿದೆ ಎನ್ನಲಾಗುತ್ತಿದೆ. ಇದರಿಂದಲೇ ಸಿಎಂ ಅಭ್ಯರ್ಥಿ ಘೋಷಣೆ ಸಾಕಷ್ಟು ವಿಳಂಬವಾಗುತ್ತಿದ್ದು, ಆದಷ್ಟು ಶೀಘ್ರವೇ ಮನವೊಲಿಕೆ ಪ್ರಯತ್ನ ಯಶಸ್ವಿಯಾದರೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಆಗಲಿದೆ.

ಇದನ್ನೂ ಓದಿ :ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ .. ಸಭೆ ಕರೆದ ಒಕ್ಕಲಿಗ ಮಠಾಧೀಶರು

Last Updated : May 14, 2023, 8:52 PM IST

ABOUT THE AUTHOR

...view details