ಬೆಂಗಳೂರು: ಸರ್ಕಾರಿ ನೌಕರನಿಗೆ ಕೋ ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿ ಬೆದರಿಕೆ ಹಾಕಿರುವ ಆರೋಪದಡಿ ಮೂವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಾನಸಭೆ ಸಚಿವಾಲಯದಲ್ಲಿ, ಸರ್ಕಾರಿ ನೌಕರರಾಗಿರುವ ಇಸಾಕ್ ಅಹಮ್ಮದ್ ಎಂಬುವವರು ನೀಡಿರುವ ದೂರಿನನ್ವಯ ಅಮರ್ ಸಿಂಗ್, ವರ್ಷಾ ಸಿಂಗ್ ಹಾಗೂ ಅಕ್ಷಯ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
2012ರಲ್ಲಿ ತಮ್ಮ ಸ್ನೇಹಿತರ ಮೂಲಕ ಪರಿಚಯವಾದ ಅಮರ್ ಸಿಂಗ್ ತಾನು ಜಯಶ್ರೀ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಅಧ್ಯಕ್ಷನಾಗಿದ್ದು, ತಮ್ಮ ಸೊಸೈಟಿಯಲ್ಲಿ ಸದಸ್ಯನಾದರೆ ನಿವೇಶನ ನೀಡುವುದಾಗಿ ಹೇಳಿ ಅರ್ಜಿ ನಮೂನೆಗಳಿಗೆ ಸಹಿ ಮಾಡಿಸಿಕೊಂಡು, ಗುರುತಿನ ಚೀಟಿ ನೀಡಿದ್ದರು. ಬಳಿಕ ಅದೇ ವಾರದಲ್ಲಿ, ನಿವೇಶನವೊಂದನ್ನು ಮಂಜೂರು ಮಾಡುವುದಾಗಿ ನಂಬಿಸಿ ಮುಂಗಡವಾಗಿ ರೂ 4,20,421 ಲಕ್ಷ ರೂಗಳನ್ನು ಪಡೆದಿದ್ದಾರೆ.
ನಂತರದಲ್ಲಿ ನಿವೇಶನ ಮಂಜೂರಿನ ಬಗ್ಗೆ ಕೇಳಿದರೆ ಸಬೂಬು ಹೇಳಿಕೊಂಡು ಸಂಪರ್ಕಕ್ಕೆ ಸಿಗದೆ ತಲೆ ಮರೆಸಿಕೊಂಡಿದ್ದರು. ಕಳೆದ ಜನವರಿಯಲ್ಲಿ ಬೇರೆ ನಂಬರಿನಿಂದ ಅಮರ್ ಸಿಂಗ್ ನನ್ನ ಸಂಪರ್ಕಿಸಿ ಭೇಟಿಯಾದಾಗ, ಅವರ ಜೊತೆಗಿದ್ದ ಅಕ್ಷಯ್ ಎಂಬಾತನು ಹಣ ನೀಡುವುದಿಲ್ಲ ಎಂದು ಜಗಳ ಮಾಡಿ ನನಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ ಮತ್ತು ಅಮರ್ ಸಿಂಗ್ ಮಗಳಾದ ವರ್ಷ ಸಿಂಗ್ ನನಗೆ ಕೆಟ್ಟ ಪದಗಳಿಂದ ಬೈದು ಮತ್ತೆ ಮತ್ತೆ ಹಣ ಕೇಳಿಕೊಂಡು ಬಂದರೆ ಅತ್ಯಾಚಾರದ ದೂರು ನೀಡಿ ಕೆಲಸದಿಂದ ತೆಗೆಸುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನೊಂದ ಇಸಾಕ್ ಅಹಮ್ಮದ್ ಸದ್ಯ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಮರ್ ಸಿಂಗ್, ಅಕ್ಷಯ್ ಹಾಗೂ ವರ್ಷಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.