ಬೆಂಗಳೂರು: ಕಮಿಷನ್ ಆರೋಪದಿಂದ ಹೊರಬರಲು ಪರದಾಡುತ್ತಿರುವ ಬಿಜೆಪಿಗೆ ನಾಳೆಯಿಂದ ಆರಂಭವಾಗಲಿರುವ ಎರಡು ದಿನದ ಕಾರ್ಯಕಾರಿಣಿ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಕ್ಷ ಸಂಘಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರ ಅಧ್ಯಕ್ಷತೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ಸಭೆ ನಡೆಯಲಿದೆ. ಇಲ್ಲಿ ಪ್ರಮುಖವಾಗಿ ಪಕ್ಷ ಸಂಘಟನೆಯ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿರುವ ರಾಷ್ಟ್ರೀಯ ಅಧ್ಯಕ್ಷರು, ಪಕ್ಷದ ಬಲವರ್ಧನೆ ಬಗ್ಗೆ ಸಲಹೆ ಸೂಚನೆ ನೀಡಲಿದ್ದಾರೆ.
ಮುಂಬರುವ ಚುನಾವಣೆಗೆ ತಯಾರಿ ನಡೆಸಿರುವ ಕೇಸರಿ ಬ್ರಿಗೇಡ್ ಪಕ್ಷದ ಸಂಘಟನೆಗೆ ಮಹತ್ವ ನೀಡಿದೆ. ಪಕ್ಷ ಸಂಘಟನೆಯ ಮೂಲಕ ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧತೆ ಮಾಡಿಕೊಂಡಿರೋ ಬಿಜೆಪಿ ಟಾರ್ಗೆಟ್ 150ಗೆ ತಯಾರಿ ನಡೆಸಲು ಮುಂದಾಗಿದೆ. ಇದೆಲ್ಲದರ ಜೊತೆಗೆ ಕಾಂಗ್ರೆಸ್ ಮಾಡ್ತಿರೋ ಆರೋಪಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎಂಬುದರ ಬಗ್ಗೆ ನಡ್ಡಾ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಜೊತೆ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ನೆಗೆಟಿವ್ ವಿಷಯಗಳ ಬಗ್ಗೆ ಜನರಿಗೆ ಹೇಗೆ ಮುಟ್ಟಿಸಬೇಕು ಹಾಗೂ ಅದನ್ನ ಹೇಗೆ ಜನರ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಿದ್ದಾರೆ.