ಬೆಂಗಳೂರು:ಉಪ ಚುನಾವಣೆಯ ಗೆಲುವಿನ ಬಳಿಕ ಶಾಸಕ ಬೈರತಿ ಬಸವರಾಜುಗೆ ರಾಮಮೂರ್ತಿ ನಗರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇಬುವಿನ ಹಾರ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಶಾಸಕ ಬೈರತಿ ಬಸವರಾಜು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದಕ್ಕೆ ಕಾರ್ಯಕರ್ತರೇ ಸಾಕ್ಷಿ. ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತೇನೆ. ಮುಂದಿನ ಮೂರೂವರೆ ವರ್ಷಗಳಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಉಪಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಎಂದು ಹೇಳಿದರು.
ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ಪಕ್ಷದ ತೀರ್ಮಾನದಂತೆ ನಾವಿಬ್ಬರು ಜೊತೆಯಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಒಂದು ಕುಟುಂಬದ ಸದಸ್ಯರಂತೆ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು. ರಾಮಮೂರ್ತಿ ನಗರ ವಾರ್ಡ್ನಲ್ಲಿ 10 ಸಾವಿರ ಅಂತರ ಬರಲು ಎಲ್ಲಾ ಮುಖಂಡರ ಕಾರ್ಯಕರ್ತರ ಶ್ರಮವಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಖಾಲಿ ಮಾಡಿಸಿ, ಬಿಜೆಪಿ ಶಾಶ್ವತವಾಗಬೇಕು. ಬೈರತಿ ಬಸವರಾಜುಗೆ ಸಚಿವ ಸಂಪುಟದಲ್ಲಿ ಉತ್ತಮವಾದ ಖಾತೆ ದೊರಕಲಿ ಎಂದು ಅಭಿನಂದಿಸಿದರು.
ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಮುಖಂಡರಾದ ಶಾಂತ ಕೃಷ್ಣಮೂರ್ತಿ, ಮುನೇಗೌಡ, ಮಧುಗೌಡ, ಹಿಟಾಚಿ ಮಂಜುನಾಥ್ ಇದ್ದರು.