ಬೆಂಗಳೂರು :ಬಿಟ್ ಕಾಯಿನ್ ಪ್ರಕರಣ ಕಾಂಗ್ರೆಸ್ನವರ ಸುಳ್ಳಿನ ಕಂತೆಯಾಗಿದೆ. ಅದಕ್ಕೆ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಬಿಟ್ ಕಾಯಿನ್ ದಂಧೆ ಕುರಿತಂತೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿರುವುದು.. ವಿಧಾಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಡ್ರಗ್ಸ್ ಕೇಸ್ ಹಿಡಿದು, ಎಲ್ಲವನ್ನೂ ಹೊರಗೆ ತಂದಿದ್ದು ನಮ್ಮ ಬೊಮ್ಮಾಯಿ ಸರ್ಕಾರ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಬೊಮ್ಮಾಯಿ ಗೃಹ ಸಚಿವರಾಗಿದ್ದರು.
ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯಡಿಯೂರಪ್ಪ ಬಳಿಕ, ಸರ್ಕಾರ ಅಸ್ಥಿರತೆ ಆಗಲಿದೆ ಅಂತಾ ಭಾವಿಸಿದ್ದರು. ಇದೀಗ ಬೊಮ್ಮಾಯಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದಾರೆ ಎಂದರು.
ಬಿಟ್ ಕಾಯಿನ್ ವಿಚಾರ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಇದರಲ್ಲಿ ಸ್ವಲ್ಪ ನಿಧಾನ ಆಗಿರಬಹುದು. ಆದರೆ, ನಂತರದಲ್ಲಿ ಸೂಕ್ತ ರೀತಿಯಲ್ಲಿ ಸರ್ಕಾರ ಈ ಪ್ರಕರಣವನ್ನು ನಿಭಾಯಿಸುತ್ತಿದೆ.
ಕಾಂಗ್ರೆಸ್ನವರು ಷಡ್ಯಂತ್ರ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಏನಾದ್ರೂ ಲೋಪದೋಷಗಳಿದ್ದರೆ ತಿಳಿಸಿ. ಇದಕ್ಕೆ ಹೆಚ್ಚಿನ ಮಹತ್ವ ನೀಡೋದು ಬೇಡ. ಸುಳ್ಳಿನ ಕಂತೆಗೆ ಹೆಚ್ಚು ಮಹತ್ವ ನೀಡೋದು ಬೇಡ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಕೆ. ಗೋಪಾಲಯ್ಯ, ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ನೀಡಲಿ. ಈಗಾಗಲೇ ಪ್ರಕರಣ ಕೇಂದ್ರದ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ. ಯಾರಿಗೆ ತನಿಖೆಗಾಗಿ ನೀಡಬೇಕು ಎಂಬುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಯಾರೇ ತಪ್ಪಿತಸ್ಥರು ಇದ್ದರೂ ಶಿಕ್ಷೆ ಆಗಲಿದೆ ಎಂದು ಹೇಳಿದರು.