ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದ್ರೋಹ ಮಾಡಿ ಒಂದೂವರೆ ವರ್ಷಗಳ ಕಾಲ ಶಾಸಕನಾಗಿರಲು ಕಾರಣವಾಗಿದ್ದ ಮತದಾರರಿಗೂ ಹಾಗೂ ಕಾಂಗ್ರೆಸ್ಗೆ ಮೋಸ ಮಾಡಿ ಬಿಜೆಪಿಗೆ ಬಸವರಾಜ್ ಅವರು ಸೇಲಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅಣಕವಾಡಿದ್ದಾರೆ.
ಬೈರತಿ ಬಿಜೆಪಿಗೆ ಸೇಲಾಗಿ ಕಾಂಗ್ರೆಸ್ಗೆ ದ್ರೋಹ ಬಗೆದಿದ್ದಾರೆ: ನಾರಾಯಣಸ್ವಾಮಿ ಟೀಕೆ
ಉಪಚುನಾವಣೆ ಪ್ರಚಾರದ ವೇಳೆ ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿ, ಬೈರತಿ ಬಸವರಾಜ್ ವಿರುದ್ಧ ಆರೋಪದ ಸುರಿಮಳೆಯೇ ಹರಿಸಿದ್ದು, ಬಿಜೆಪಿಗೆ ಸೇಲಾಗುವ ಮೂಲಕ ಕಾಂಗ್ರೆಸ್ಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದ್ದಾರೆ.
ಇಂದು ದೇವಸಂದ್ರ ವಾರ್ಡ್ ನಲ್ಲಿ ಮಸೀದಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಚುನಾವಣೆ ಬೇಡ ಎಂದು ಬಸವರಾಜ್ಗೆ ನೀವು ಆರ್ಶೀವಾದ ಮಾಡಿದ್ದಿರಿ. ಆದರೆ ಅವರಿಗೆ ಏನು ಕಡಿಮೆಯಾಯಿತೋ ಗೊತ್ತಿಲ್ಲ, ಒಂದೂವರೆ ವರ್ಷಕ್ಕೆ ಮತ ಹಾಕಿದ ಮತದಾರರನ್ನು ಬಿಟ್ಟು ಬಿಜೆಪಿಗೆ ಓಡಿ ಹೋಗಿದ್ದಾರೆ. ಈಗ ಬಂದು ಹೇಳುತ್ತಾರೆ ನಾನು ಕಾಂಗ್ರೆಸ್ ನಲ್ಲಿ ಇಲ್ಲ ಬಿಜೆಪಿಗೆ ಸೇಲ್ ಆಗಿದ್ದೇನೆ ಎಂದು. ಇವರಿಗೆ ಮಾನ ಮಾರ್ಯಾದೆ ಇದೆಯಾ ಎಂದು ಏಕವಚನದಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್ ಭದ್ರಕೋಟೆ ಇದು. ಒಮ್ಮೆ ಮಾತ್ರ ಬಿಜೆಪಿಯಿಂದ ನಂದೀಶ್ ರೆಡ್ಡಿ ಅವರು ಶಾಸಕರಾಗಿದ್ದರು ಅಷ್ಟೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದೂವರೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದರು. ಇದನ್ನೆಲ್ಲ ಮರೆತು ಬಸವರಾಜ್ ಬಿಜೆಪಿ ಸೇರಿರುವುದು ಎಷ್ಟು ಸರಿ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮತದಾರ ಪ್ರಭುವಿಗೆ ನಾರಾಯಣಸ್ವಾಮಿ ವಿನಂತಿ ಮಾಡಿದರು.