ಕರ್ನಾಟಕ

karnataka

ರೈತರ ಸಾಲದ ಮೇಲೆ ಜಪ್ತಿ ಹರಾಜು ಮಾಡಬಾರದು ಎಂಬ ಕಾನೂನನ್ನು ತರಲಾಗುವುದು: ಬಸವರಾಜ್​ ಬೊಮ್ಮಾಯಿ

ರೈತರ ಸಾಲ ಮಾರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು, ಸಹಾಯ ಮಾಡಬೇಕೇ ಹೊರತಾಗಿ ಯಾವುದೇ ಜಪ್ತಿ ಹಾಗೂ ಹರಾಜು ಮಾಡುವುದು ಮಾಡಬಾರದೆಂದು ಸಿಎಂ ಬೊಮ್ಮಾಯಿ ಹೇಳಿದರು

By

Published : Nov 5, 2022, 10:37 PM IST

Published : Nov 5, 2022, 10:37 PM IST

kn_bng_03
ಬಸವರಾಜ್​ ಬೊಮ್ಮಾಯಿ

ಯಲಹಂಕ: ರೈತರ ಸಾಲದ ಮೇಲೆ ಜಪ್ತಿ ಆಗಲಿ ಹರಾಜಾಗಲಿ ಮಾಡಬಾರದು ಎಂಬ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಯಲಹಂಕದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳ ಸಮಾರಂಭದಲ್ಲಿ ಪಾಲ್ಗೊಂಡು ರೈತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ರೈತರ ಸಾಲ ಮಾರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು, ಸಹಾಯ ಮಾಡಬೇಕೇ ಹೊರತಾಗಿ ಯಾವುದೇ ಜಪ್ತಿ ಹಾಗೂ ಹರಾಜು ಮಾಡುವುದು ಮಾಡಬಾರದೆಂದು ಸಹಕಾರ ಹಾಗೂ ಇತರ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆ ತರಬೇಕು. ಕೃಷಿ ಯೋಜನೆಗಳು ಕೃಷಿ ವಲಯಗಳಿಗೆ ಅನುಗುಣವಾಗಿ ಆಗಬೇಕು. ಸಮಗ್ರ ಕೃಷಿ ಪರಿಣಾಮಕಾರಿಯಾಗಿರುತ್ತದೆ. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಭೂಮಿಯಲ್ಲಿ ಇತರ ಕೃಷಿ ಆಧಾರಿತ ಚಟುವಟಿಕೆ ಮಾಡಿದರೆ ಕೃಷಿಯನ್ನು ಲಾಭದಾಯಕವಾಗಿಸಬಹುದು.

2-3 ಎಕರೆಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಿದೆ. ಇದನ್ನು ಪ್ರತಿ ರೈತನೂ ಮಾಡಿದಾಗ ರೈತರು ಅಭಿವೃದ್ಧಿಯಾಗಬಹುದು. ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆಯನ್ನು ತರಬೇಕು ಎಂದರು.

ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು:ರೈತ ಉತ್ಪಾದಕ ಸಂಘಗಳು 8-10 ಕೋಟಿ ವಹಿವಾಟು ಮಾಡಿ ಲಾಭ ಮಾಡಿಕೊಂಡಿವೆ. ಮಧ್ಯವರ್ತಿಗಳಿಗೆ ಹೋಗುತ್ತಿದ್ದ ಹಣ, ಸಂಘಕ್ಕೇ ಉಳಿಯುತ್ತಿದೆ. ಅದಕ್ಕಾಗಿ ಮೀನುಗಾರಿಗೆ, ನೇಕಾರರ ಎಫ್.ಪಿ.ಒ ಗಳಿಗೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು. ನಬಾರ್ಡ್ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಸ್ಕೇಲ್ ಆಫ್ ಬ್ಯಾಲೆನ್ಸ್ ಬದಲಾಗಬೇಕೆಂದು ಒತ್ತಾಯ ಮಾಡಲಾಗಿದೆ ಎಂದರು. ಶೇ 80ರಷ್ಟು ರೈತರು ಸಣ್ಣ ರೈತರಿದ್ದಾರೆ. ಅವರಿಗೆ 8-10 ಲಕ್ಷ ದೊರೆತರೆ ಅನುಕೂಲವಾಗುತ್ತದೆ ಎಂದರು.

ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು:ಕೃಷಿ ಬೆಳೆದಿದೆ, ಆದರೆ ರೈತ ಬೆಳೆದಿಲ್ಲ. ಈ ಬಗ್ಗೆ ಸ್ಪಷ್ಟ ನೀತಿ ಅಗತ್ಯವಿದೆ. ಕೃಷಿ ಅನಿಶ್ಚಿತತೆಯ ಬದುಕು. ಮಳೆಯ ಮೇಲೆ ಅವನ ಬದುಕು ಅವಲಂಬಿತವಾಗಿದೆ. ಮಳೆ ಬಾರದಿದ್ದರೂ, ಅತಿಯಾದ ಮಳೆಯಾದರೂ ನಷ್ಟ. ಕೊಳವೆಬಾವಿ ಕೊರೆಸಿದರೆ ವಿದ್ಯುತ್ ಸಂಪರ್ಕ, ವಿದ್ಯುತ್ ಸಂಪರ್ಕ ದೊರೆತರೆ ಎಷ್ಟು ದಿನ ಕೊಳವೆಬಾವಿ ಇರುತ್ತದೋ ತಿಳಿಯದ ಸ್ಥಿತಿ ಇದೆ.

ಪ್ರತಿಯೊಂದು ಅನಿಶ್ಚಿತತೆಯಿಂದ ಕೂಡಿದೆ. ರೈತರ ಬದುಕಿಗೆ ನಿಶ್ಚಿತತೆ ಇದ್ದರೆ ಮಾತ್ರ ಉತ್ಪಾದನೆ ಸಾಧ್ಯ, ಬೆಲೆ ಸಿಗಲು ಸಾಧ್ಯ. ಈ ಪ್ರಯೋಗವನ್ನು ಕರ್ನಟಕದಲ್ಲಿ ಮೊಟ್ಟಮೊದಲಿಗೆ ಮಾಡಿದರು ಕೃಷ್ಣ ಬೈರೇಗೌಡರ ತಂದೆ ಬೈರೇಗೌಡರು. ಈ ರಾಜ್ಯದ ಎಲ್ಲ ಭಾಗದಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಸಂಪೂರ್ಣವಾಗಿ ವ್ಯಾಖ್ಯಾನ ಮಾಡುವ ಶಕ್ತಿ ಅವರಲ್ಲಿತ್ತು. ಕೃಷಿಕರು, ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ, ಎಲ್ಲ ಪಕ್ಷಗಳೂ ರೈತನಿಗೆ ಸೇರಿವೆ. ಸರ್ಕಾರ ನಡೆಸುವವರು ಇದನ್ನು ಮನಗಂಡಾಗ ಮಾತ್ರ ನಿರಂತರವಾಗಿ ರೈತರ ಏಳಿಗೆಗೆಗಾಗಿ ಕಾರ್ಯಕ್ರಮಗಳು ಆಗುತ್ತವೆ. ಕೃಷಿಕನ್ನು ಉದ್ಧಾರ ಮಾಡಲು ಸಂಶೋಧನೆಯ ಫಲವೂ ಬೇಕು. ವಿಶ್ವವಿದ್ಯಾಲಯಗಳು ಆವರಣದಿಂದ ಹೊರಗೆ ಬಂದು ಪ್ರಯೋಗ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ಕಂದಾಯ ಸಚಿವ ಆರ್. ಅಶೋಕ್, ಶಾಸಕ ಕೃಷ್ಣ ಬೈರೇಗೌಡ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಸ್.ವಿ.ಸುರೇಶ್, ಹನುಮಂತಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ:ವ್ಯಾಜ್ಯಗಳ ಪರಿಹಾರಕ್ಕಾಗಿ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಗೆ ಸರ್ಕಾರ ಸಿದ್ಧ: ಸಿಎಂ ಬೊಮ್ಮಾಯಿ

ABOUT THE AUTHOR

...view details