ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಭೀತಿ ಹೆಚ್ಚಾಗಿದ್ದು, ಹಬ್ಬ ಹರಿದಿನಗಳ ಸಾರ್ವಜನಿಕ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಇದರ ನಡುವೆ ಬೆಂಗಳೂರು ಕರಗ ಆಚರಣೆಗೆ ಅವಕಾಶ ಮಾಡಿ ಕೊಡಿ ಎಂಬ ಕೂಗು ಕೇಳಿ ಬಂದಿದೆ.
ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಎ.ರಾಜ್ ಗೋಪಾಲ್ ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಇದರ ನಡುವೆ ಹೋಳಿ, ಯುಗಾದಿ, ಗುಡ್ ಫ್ರೈಡೆ ಸೇರಿದಂತೆ ಪ್ರಮುಖ ಹಬ್ಬಗಳ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ಸರ್ಕಾರದ ನಿಯಮಗಳನ್ನು ಶೇಕಡಾ ನೂರರಷ್ಟು ಪಾಲಿಸುವ ಮೂಲಕ ಬೆಂಗಳೂರು ಕರಗ ಆಚರಣೆ ಮಾಡುತ್ತೇವೆ. ಇದಕ್ಕೆ ಅವಕಾಶ ಕೊಡಿ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಎ.ರಾಜ್ ಗೋಪಾಲ್, ರಂಜಾನ್, ಹೋಳಿ ಪ್ರತಿವರ್ಷ ಆಚರಣೆಯಾಗುತ್ತವೆ. ಆದರೆ ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗಕ್ಕೆ 800 ವರ್ಷಗಳ ಇತಿಹಾಸ ಇದೆ. ಬ್ರಿಟಿಷ್ ಕಾಲದಲ್ಲಿ ಕರ್ಫ್ಯೂ ಇದ್ದಾಗಲೂ ಕರಗ ಆಚರಣೆಗೆ ಅವಕಾಶ ಮಾಡಿ ಕೊಟ್ಟಿದ್ದರು ಎಂದರು.
ಓದಿ: ಸಿಡಿ ಪ್ರಕರಣದ ಯುವತಿಯ ಮೂರನೇ ವಿಡಿಯೋ ಬಿಡುಗಡೆ.. ಆಕೆ ಹೇಳಿದ್ದೇನು.?
ಸಿಎಂ ಯಡಿಯೂರಪ್ಪನವರು ಕಳೆದ ಬಾರಿ ಕರಗವನ್ನು ದೇವಸ್ಥಾನದ ಒಳಗೆ ಆಚರಣೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದರು. ಅದಕ್ಕೆ ನಾವು ಚಿರಋಣಿ. ಈಗಲೂ ಅವರೇ ಸಿಎಂ ಇರುವುದರಿಂದ ನಮಗೆ ನಿರ್ಬಂಧ ವಿಧಿಸಲ್ಲ ಎಂಬ ನಂಬಿಕೆ ಇದೆ. ಸಾಂಪ್ರದಾಯಿಕವಾಗಿ, ವಿಧಿವಿಧಾನಗಳನ್ನು ಪೂರೈಸಿ ದೇವಸ್ಥಾನದ ಒಳಗೆ ಆಚರಣೆ ಮಾಡುತ್ತೇವೆ. ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.