ಬೆಂಗಳೂರು: ಚಾಮರಾಜಪೇಟೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣ ಸಂಬಂಧ ನಿಜವಾದ ಪೋಷಕರು ಯಾರೆಂದು ತಿಳಿಯುವಂತೆ ನ್ಯಾಯಾಲಯ ಸೂಚನೆ ನೀಡಿದ ಹಿನ್ನೆಲೆ ಮಗು ಸೇರಿದಂತೆ ಐವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ.
ಒಂದು ವರ್ಷದ ಮಗು, ಚಾಮರಾಜಪೇಟೆಯ ಪಾದರಾಯನಪುರ ದಂಪತಿ ಉಸ್ಮಾಭಾನು-ನವೀದ್ ಪಾಷಾ ಹಾಗೂ ಕೊಪ್ಪಳ ಮೂಲದ ದಂಪತಿ ಸೇರಿದಂತೆ ಒಟ್ಟು ಐದು ಜನರ ಮಾದರಿಯನ್ನು ಡಿಎನ್ಎ ಪರೀಕ್ಷೆಗೆಂದು ಸಂಗ್ರಹಿಸಲಾಗಿದೆ.
ರಕ್ತದ ಮಾದರಿ ಮತ್ತು ಟೆಸ್ಟ್ಗೆ ಅಗತ್ಯವಿರುವ ಎಲ್ಲ ಸ್ಯಾಂಪಲ್ಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ಪರೀಕ್ಷಾ ವರದಿ ಬರಲು ಇನ್ನೊಂದು ತಿಂಗಳು ಬೇಕಾಗಿದ್ದು, ತ್ವರಿತವಾಗಿ ವರದಿ ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಹೆತ್ತವ್ವನ ಗೋಳಾಟ:
ಪಾದರಾಯನಪುರ ನಿವಾಸಿಯಾದ ನವೀದ್ ಪಾಷಾ ಹಾಗೂ ಉಸ್ಮಾಭಾನು ದಂಪತಿಗೆ 2020ರ ಮೇ 29ರಂದು ಚಾಮರಾಜಪೇಟೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಾಗಿತ್ತು. ಶಿಶು ಜನಿಸಿದ ಎರಡು ಗಂಟೆಯಲ್ಲಿ ವೈದ್ಯೆ ಡಾ. ರಶ್ಮಿ ಮಗು ಕದ್ದಿದ್ದರು ಎಂದು ಆರೋಪಿಸಲಾಗಿತ್ತು.
ಕಳೆದ ಮೇ 29ರಂದೇ ಪೊಲೀಸರು ಮಗು ಪತ್ತೆ ಹಚ್ಚಿದ್ದರು. ಆದರೆ ಮಗು ನೀಡುವ ಮುನ್ನ ಟೆಸ್ಟ್ ಮಾಡಿ ಖಾತ್ರಿಪಡಿಸಿಕೊಳ್ಳಬೇಕಾದ ಹಿನ್ನೆಲೆ ಪೊಲೀಸರು ಕಂದನನ್ನು ಪಾಲಕರಿಗೆ ನೀಡರಲಿಲ್ಲ. ಇದರಿಂದಾಗಿ ಪ್ರತಿ ದಿನ ಉಸ್ಮಾಭಾನು ಠಾಣೆಗೆ ಬಂದು ಮಗು ನೆನೆದು ಕಣ್ಣೀರಿಟ್ಟು ಹಿಂದಿರುಗುತ್ತಿದ್ದರಂತೆ.
ಮಗು ದೂರ ಮಾಡದಂತೆ ಕೊಪ್ಪಳ ದಂಪತಿ ಕಣ್ಣೀರು:
ಇನ್ನೊಂದಡೆ ಕೊಪ್ಪಳ ಮೂಲದ ದಂಪತಿಯು ಮಗು ತಮ್ಮದೇ ಎಂದು ಸಾಕಿ ಸಲಹುತ್ತಿದ್ದೇವೆ. ಮಗುವನ್ನು ರಾಜಕುಮಾರನಂತೆ ಸಾಕಿದ್ದೇವೆ. ದಯವಿಟ್ಟು ಮಗುವನ್ನು ನಮ್ಮಿಂದ ದೂರ ಮಾಡಬೇಡಿ ಎಂದು ಕಣ್ಣೀರು ಸುರಿಸಿ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ:
ಮಗುವನ್ನು ಪಡೆದಿದ್ದರು ಎನ್ನಲಾದ ಕೊಪ್ಪಳ ಮೂಲದ ದಂಪತಿಯನ್ನು ಈಗಾಗಲೇ ಒಂದು ಬಾರಿ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದೆ. ಡಿಎನ್ಎ ವರದಿ ಬಳಿಕ ಮಗುವಿನ ಹೆತ್ತವರನ್ನು ಹಾಗೂ ಪಾಲನೆ ಮಾಡಿದ ದಂಪತಿಯ ವಿಚಾರಣೆ ನಡೆಸಲಾಗುವುದು.
ಪ್ರಕರಣದ ಹಿನ್ನೆಲೆ:
ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಮಾಡಿದ್ದ ವೈದ್ಯೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ಡಾ. ರಶ್ಮಿ ಬಂಧಿತೆ. ಮನೋ ವೈದ್ಯೆಯಾಗಿದ್ದ ಈಕೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ 2014ರಲ್ಲಿ ಹುಬ್ಬಳ್ಳಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿ ಪರಿಚಯವಾಗಿತ್ತು. ದಂಪತಿ ಮಗಳಿಗೆ ಬುದ್ಧಿಮಾಂದ್ಯತೆ ಹಿನ್ನೆಲೆ ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು.
ಈ ವೇಳೆ ವೈದ್ಯೆ ಒಂದು ಉಪಾಯ ಕೊಟ್ಟಿದ್ದಾಳೆ. ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ₹15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಾಳೆ. ಆದರೆ ಈಕೆ ಮಾಡಿದ್ದೇ ಬೇರೆ ಕೆಲಸ. ಪಾದರಾಯನಪುರ ನಿವಾಸಿಯಾದ ನವೀದ್ ಪಾಷಾ ಹಾಗೂ ಉಸ್ಮಾಭಾನು ದಂಪತಿ ಮಗುವನ್ನು ಕದ್ದು ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಗು ಕಳ್ಳತನ ಪ್ರಕರಣ ಸಂಬಂಧ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಹಾಗೂ ನೆಟ್ವರ್ಕ್ ಟವರ್ ಡಂಪ್ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಮಗು ಅಪಹರಣ ಅವಧಿಯಲ್ಲಿ ಟವರ್ ಲೊಕೇಷನ್ ಆಧರಿಸಿ ಸಾವಿರಾರು ಸಂಖ್ಯೆ ಮೊಬೈಲ್ ನಂಬರ್ ಸಂಗ್ರಹಿಸಿ ಸುಮಾರು 800 ಜನರನ್ನು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ:ನವಜಾತ ಶಿಶು ಕದ್ದು 15 ಲಕ್ಷ ರೂ.ಗೆ ಮಾರಿದ್ದ ಖತರ್ನಾಕ್ ವೈದ್ಯೆ ಅರೆಸ್ಟ್
ಈ ವೇಳೆ ರಶ್ಮಿ ಅವರನ್ನು ವಿಚಾರಣೆ ನಡೆಸಿದಾಗ ಕಾನೂನುಬದ್ಧವಾಗಿ ಮಗುವಿನ ವ್ಯವಹಾರ ನಡೆಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದಳು. ಈಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ತನಿಖೆ ಆಳಕ್ಕೆ ಇಳಿದಾಗ ಈಕೆ ಮಗುವಿನ ಕಳ್ಳಿ ಎಂದು ಭಾವಿಸಿ ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಕೃತ್ಯ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವಿವಿಧ ಪರೀಕ್ಷೆಯಲ್ಲಿ ದೃಢವಾದ ಬಳಿಕವಷ್ಟೇ ಮಗು ಪೋಷಕರಿಗೆ:
ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಬಾಡಿಗೆ ಪೋಷಕರಿಂದ ಮಗುವನ್ನು ನಗರಕ್ಕೆ ಕರೆದುಕೊಂಡು ಬಂದಿದ್ದರೂ ಮಗುವನ್ನು ಪೊಲೀಸರು ಡಿಎನ್ಎ ಸೇರಿದಂತೆ ವಿವಿಧ ಪರೀಕ್ಷೆ ನಡೆಸಿ ದೃಢವಾದ ಬಳಿಕವಷ್ಟೇ ಪೋಷಕರಿಗೆ ಒಪ್ಪಿಸಲಿದ್ದಾರೆ.