ಕರ್ನಾಟಕ

karnataka

ದಾಖಲೆ ಇಲ್ಲದ 10 ಲಕ್ಷ ಹಣ ಪತ್ತೆ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಕಂತೆ ಕಂತೆ ಹಣ ಎಣಿಸುತ್ತಿದ್ದ ಇಬ್ಬರನ್ನು ಅನುಮಾನಗೊಂಡು ರೌಂಡ್ಸ್​ನಲ್ಲಿದ್ದ ಪೊಲೀಸರು ವಿಚಾರಿಸಿದ್ದು, ಹಣಕ್ಕೆ ದಾಖಲೆ ನೀಡದ ಹಿನ್ನೆಲೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

By

Published : Jan 13, 2023, 5:06 PM IST

Published : Jan 13, 2023, 5:06 PM IST

Hebbagodi Police Station and Car
ಹೆಬ್ಬಗೋಡಿ ಪೊಲೀಸ್​ ಠಾಣೆ ಹಾಗೂ ಕಾರು

ಆನೇಕಲ್: ಅನುಮಾನಾಸ್ಪದವಾಗಿ ಕಾರನ್ನು ನಿಲ್ಲಿಸಿಕೊಂಡು 10 ಲಕ್ಷ ಹಣವನ್ನು ಲೆಕ್ಕ ಹಾಕುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ.

ಕೆಎ 52 ಎನ್​ 0603 ಇನೋವಾ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ನಿರ್ಜನ ಪ್ರದೇಶದಲ್ಲಿ ಕುಳಿತು ಕಂತೆ ಕಂತೆ ನೋಟು ಎಣಿಸುತ್ತಿದ್ದರು. ರೌಂಡ್ಸ್​ನಲ್ಲಿ ಇದ್ದ ಪೊಲೀಸರು ಅನುಮಾನಗೊಂಡ ಹಿನ್ನೆಲೆ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕಾರಿನಲ್ಲಿ 10 ಲಕ್ಷ ಹಣ ಸಿಕ್ಕಿದ್ದು, ಅದಕ್ಕೆ ದಾಖಲೆ ಕೇಳಿದ್ದಾರೆ. ಆದರೆ ಸರಿಯಾದ ಉತ್ತರ ಸಿಗದ ಹಿನ್ನೆಲೆ ಹುಸ್ಕೂರು ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಲ್ಲೇಶ್ ಮತ್ತು ನೆಲಮಂಗಲದ ರಾಜೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಲ್ಲೇಶ್ ತಮ್ಮನಿಂದ ಹಣವನ್ನು ಪಡೆದುಕೊಂಡು ಬಂದಿರುವುದಾಗಿ ಪೊಲೀಸ್ ಠಾಣೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಸರಿಯಾದ ದಾಖಲೆ ನೀಡದ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಹಣವನ್ನು ಒಪ್ಪಿಸಲಾಗಿದೆ.

ವಿಧಾನಸೌಧದಲ್ಲಿ ಪತ್ತೆಯಾಗಿದ್ದ 10 ಲಕ್ಷ ನಗದು:ಹೊಸ ವರ್ಷ ಪ್ರಾರಂಭದಲ್ಲೇ ವಿಧಾನಸೌಧದ ಸೌತ್​ವೆಸ್ಟ್​ ಗೇಟ್​ ಬಳಿ ಹತ್ತು ಲಕ್ಷ ಪತ್ತೆಯಾಗಿತ್ತು. ವಿಧಾನಸೌಧಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್​ನನ್ನು ಭದ್ರತಾಪಡೆ ತಪಾಸಣೆಗೊಳಪಡಿಸಿದಾಗ ಅವರ ಬ್ಯಾಗ್​ನಲ್ಲಿ ಹತ್ತು ಲಕ್ಷ ರೂಪಾಯಿ ನಗದು ಪತ್ತೆಯಾಗಿತ್ತು. ಇದರ ಬಗ್ಗೆ ನಿಖರ ಮಾಹಿತಿ ನೀಡದ ಹಿನ್ನೆಲೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಿಯ ಇಂಜಿನಿಯರ್​ ಜಗದೀಶ್​ ಎಂಬವರನ್ನು ಹಾಗೂ ಅವರ ಬ್ಯಾಗ್​ನಲ್ಲಿ ದೊರೆತ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸರು ಹಣವನ್ನು ಕೋರ್ಟ್​ ವಶಕ್ಕೆ ನೀಡಿದ್ದು, ಸರಿಯಾದ ದಾಖಲೆ ನೀಡಿ ಹಣವನ್ನು ಕೋರ್ಟ್​ನಿಂದಲೇ ಪಡೆಯುವಂತೆ ತಿಳಿಸಿದ್ದರು. ವಿಚಾರಣೆ ವೇಳೆ ಜಗದೀಶ್​ ಹಣವನ್ನು ಮಂಡ್ಯಕ್ಕೆ ತೆಗದುಕೊಂಡು ಹೋಗಲು ತಂದಿರುವುದಾಗಿ ಹೇಳಿದ್ದರು. ಆದರೆ, ಅವರ ಬಳಿ ಅದಕ್ಕೆ ಪೂರಕವಾದ ಯಾವುದೇ ದಾಖಲೆಗಳು ಇರಲಿಲ್ಲ. ನಂತರದಲ್ಲಿ ವಕೀಲರೊಂದಿಗೆ ವಿಚಾರಣೆಗೆ ಪೊಲೀಸ್​ ಠಾಣೆಗೆ ಹಾಜರಾಗಿದ್ದ ಜಗದೀಶ್​, ವಿಚಾರಣೆ ವೇಳೆ ಹಣದ ಮೂಲದ ಬಗ್ಗೆ ಯಾವುದೇ‌ ಸಮಂಜಸವಾದ ಉತ್ತರ ನೀಡಿರಲಿಲ್ಲ. ಯಾವುದೇ ದಾಖಲಾತಿಯನ್ನೂ ಒದಗಿಸಿರಲಿಲ್ಲ. ಯಾರಿಗೆ ಹಣ ಕೊಡಬೇಕು‌? ಎಲ್ಲಿಂದ ಹಣ ಬಂದಿದೆ ಎಂಬುದರ ಬಗ್ಗೆ ಅನುಮಾನಾಸ್ಪದವಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿತ್ತು. ಆದರೆ ಅವರು ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

ಸ್ವತಃ ಸ್ಪಷ್ಟನೆ ಕೊಟ್ಟಿದ್ದ ಜಗದೀಶ್:ಸ್ವತಃ ಜಗದೀಶ್​ ಅವರು ಹತ್ತು ಲಕ್ಷ ಹಣ ನನ್ನದೆ, ಈ ದುಡ್ಡಿನ ಹಿಂದೆ ಯಾವ ಸಚಿವರ ಪಾತ್ರವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದು ನನ್ನ ಸ್ವತಂ ಹಣ, ಅಕ್ರಮ ಹಣವಲ್ಲ. ಹಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿದ್ದೇನೆ ಎಂದು ಹೇಳಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಗಂಭೀರ ಅಪರಾಧ ಸ್ವರೂಪವಲ್ಲದ ಪ್ರಕರಣವಾಗಿರುವುದರಿಂದ ಜಗದೀಶ್‌ಗೆ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ:ರಾಜಸ್ಥಾನದ ಎರಡು ಉದ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ: 41 ಕೋಟಿ ಅಕ್ರಮ ಹಣ ಪತ್ತೆ

ABOUT THE AUTHOR

...view details