ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು, ಬಾದಾಮಿ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರ ಜೊತೆಗೆ ನೂತನ ತಾಲೂಕು ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರವನ್ನು ಹೆರಿಗೆ ಆಸ್ಪತ್ರೆ ಹಾಗೂ ಸಾಮಾನ್ಯ ರೋಗಿಗಳಿಗೆ ಮೀಸಲಿಡಲಾಗಿದೆ. ಆದರೆ, ಆಸ್ಪತ್ರೆಯ ಮುಖ್ಯವೈದ್ಯರು ಸೇರಿ ಏಳು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಇದರಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ, ತುರ್ತು ಚಿಕಿತ್ಸೆ ಮಾತ್ರ ಶುರು ಮಾಡಲಾಗಿದೆ.
ಇದೀಗ ಹೆರಿಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ಹೆರಿಗೆಗೆ ಬರುವ ಗರ್ಭಿಣಿಯರು ತೊಂದರೆ ಅನುಭವಿಸುವಂತಾಗಿದೆ. ಗುಳೇದಗುಡ್ಡ ಪಟ್ಟಣದಲ್ಲಿ 296 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 967 ಗರ್ಭಿಣಿಯರು ಇದ್ದಾರೆ. ಸ್ಥಳೀಯವಾಗಿ ಹೆರಿಗೆ ಆಸ್ಪತ್ರೆ ಸೇವೆ ಸಿಗದೇ ಅವರೆಲ್ಲರೂ ಈಗ ಖಾಸಗಿ ಆಸ್ಪತ್ರೆ ಇಲ್ಲವೇ ಜಿಲ್ಲಾ ಕೇಂದ್ರದ ಕಡೆಗೆ ಮುಖ ಮಾಡಬೇಕಿದೆ. ಹೀಗಾಗಿ ಸೋಂಕು ಕಾಣಿಸಿರುವ ವೈದ್ಯರು ಹಾಗೂ ಸಿಬ್ಬಂದಿ ಕ್ವಾರಂಟೈನ್ ಮುಗಿಸಿ ಬರುವವರೆಗೂ ಆಸ್ಪತ್ರೆಗೆ ತಾತ್ಕಾಲಿಕವಾಗಿ ಹೆರಿಗೆ ವೈದ್ಯರನ್ನು ನೇಮಿಸಬೇಕು. ಗರ್ಭಿಣಿಯರಿಗೆ ಅನುಕೂಲ ಕಲ್ಪಿಸಬೇಕು. ಈ ಬಗ್ಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.