ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಕ್ಷೇತ್ರದಲ್ಲಿ ಕಳೆದ 32 ವರ್ಷಗಳಿಂದ ರಂಗ ಕಲಾ ಮಂದಿರವೊಂದರ ಕಾಮಗಾರಿ ಪೂರ್ಣಗೊಳ್ಳದೇ ಅನೈತಿಕ ಚಟುವಟಿಕೆಗಳ ಗೂಡಾಗುತ್ತಿದ್ದು, ಬಹುದಿನಗಳ ಜನರ ಆಸೆ ಕನಸಾಗಿಯೇ ಉಳಿದಿದೆ.
ಅಂದು ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ನಾಟಕ ಕಂಪನಿಗಳು, ಆಲೆ ಮನೆ ನಾಟಕ ಕಲಾವಿದರು, ಹವ್ಯಾಸಿ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದು, ಕಾರಣ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು 'ಕಂದಗಲ್ಲ ಹನಮಂತರಾಯ ರಂಗಮಂದಿರ' ನಿರ್ಮಾಣಕ್ಕೆ ಮುಂದಾಗಿ ಕಾಮಗಾರಿ ಪ್ರಾರಂಭಿಸಿದ್ದರು.
ಆದರೆ, ಅಂದಿನಿಂದ ಇಲ್ಲಿಯವರೆಗೂ ಸರ್ಕಾರ ದಿಂದ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈಗಿನ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರವರು ಹಿಂದೆ ಕನ್ನಡ ಸಂಸ್ಕೃತ ಇಲಾಖೆ ಸಚಿವರಾಗಿದ್ದ ಸಮಯದಲ್ಲಿ 30 ಲಕ್ಷ, ನಟಿ ಹಾಗೂ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಅವರು ಕನ್ನಡ ಸಂಸ್ಕೃತ ಇಲಾಖೆ ಸಚಿವೆಯಾಗಿದ್ದ ಸಮಯದಲ್ಲಿ 40 ಲಕ್ಷ ಅನುದಾನ ನೀಡಿದ್ದಾರೆ.