ಕರಾಚಿ( ಪಾಕಿಸ್ತಾನ): ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಆಡುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಆತಂಕ ವ್ಯಕ್ತಪಡಿಸಿದ್ದಾರೆ. ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಬಳಿ ಈ ಆತಂಕವನ್ನು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಿಸಿಬಿ ಫೈನಲ್ ಪಂದ್ಯ ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯಬೇಕು ಎಂಬುದಾಗಿ ಬಯಸಿದೆ ಎಂದು ತಿಳಿದು ಬಂದಿದೆ.
ಬಾರ್ಕ್ಲೇ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ಜಿಯೋಫ್ ಅಲ್ಲಾರ್ಡಿಸ್ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿದ್ದರು. ಈ ವೇಳೆ, ವಿಶ್ವಕಪ್ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಬೇಕು ಎಂದು ತಾನು ಒತ್ತಾಯಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಖಚಿತ ಪಡಿಸಿತ್ತು. ಇನ್ನೊಂದಡೆ, ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್ ನಡೆಸುವ ಪಿಸಿಬಿ ಮನವಿಯನ್ನು ಈ ಮೊದಲೇ ಐಸಿಸಿ ತಳ್ಳಿ ಹಾಕಿತ್ತು. ಆದರೆ, ಪಾಕಿಸ್ತಾನವು ಅಹಮದಾಬಾದ್ನಲ್ಲಿ ಪಂದ್ಯಗಳನ್ನು ನಿಗದಿಪಡಿಸುವುದನ್ನು ಬಯಸುವುದಿಲ್ಲ ಎಂದು ನಜಮ್ ಸೇಥಿ, ಬಾರ್ಕ್ಲೇ ಮತ್ತು ಅಲಾರ್ಡಿಸ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
"ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ಮಹತ್ವದ ಟೂರ್ನಿಗೆ ಪಾಕಿಸ್ತಾನ ತಂಡ ರೆಡಿಯಾಗಿದ್ದು, ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಿದೆ. ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ತಮ್ಮ ಪಂದ್ಯಗಳನ್ನು ನಿಗದಿಪಡಿಸುವಂತೆ ಇದೇ ವೇಳೆ ಪಿಸಿಬಿ ಮುಖಸ್ಥ ನಜಮ್ ಸೇಥಿ ಐಸಿಸಿಗೆ ವಿನಂತಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್ನಲ್ಲಿ ಭಾರತ - ಪಾಕ್ ಪಂದ್ಯ ನಡೆದರೆ, ತಮ್ಮ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದು ಸೇಥಿ ಹೇಳಿದ್ದಾರೆ. 2005 ರಲ್ಲಿ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ.