ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶನ ನೀಡಲು ಭಾನುವಾರ ಸಂಜೆ 9ಗಂಟೆ ದೀಪ ಹಚ್ಚುವುದಕ್ಕೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ದೇಶದ ಜನತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.
ಕೋವಿಡ್-19 ವಿರುದ್ಧ ಹೋರಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಲು ಈ ಹಿಂದೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಕರೆ ನೀಡಿದ್ದ ಮೋದಿ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲಾ ಲೈಟ್ಗಳನ್ನು ಹಾರಿಸಿ ಬಾಗಿಲ ಬಳಿ ದೀಪ, ಕ್ಯಾಂಡಲ್ ಮತ್ತು ಟಾರ್ಚ್ನ 9 ನಿಮಿಷಗಳ ಕಾಲ ಉರಿಸುವ ಮೂಲಕ ಪ್ರತಿಯೊಬ್ಬರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.
ಈ ಕರೆಯನ್ನು ಬೆಂಬಲಿಸಿರುವ ಕೊಹ್ಲಿ," ಕ್ರೀಡಾಂಣದ ಶಕ್ತಿ ಅಭಿಮಾನಿಗಳಲ್ಲಿದೆ, ಭಾರತದ ಚೈತನ್ಯ ಜನರ ಕೈಯಲ್ಲಿದೆ, ಇಂದು ರಾತ್ರಿ 9 ಗಂಟೆಗೆ ದೀಪ ಉರಿಸುವ ಮೂಲಕ ನಾವೆಲ್ಲಾ ಒಂದೇ ಎನ್ನುವುದನ್ನು ವಿಶ್ವಕ್ಕೆ ತೋರಿಸೋಣ, ನಮಗಾಗಿ ಹೋರಾಡುತ್ತಿರುವ ಆರೋಗ್ಯ ಯೋಧರನ್ನು ತೋರಿಸೋಣ, ನಾವು ಅವರ ಹಿಂದೆ ನಿಲ್ಲೋಣ" ಎಂದು ಭಾರತದ ಜನತೆಗೆ ದೀಪ ಹಚ್ಚಲು ಕರೆ ನೀಡಿದ್ದಾರೆ.
ಭಾರತ ತಂಡದ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಕೂಡ "ನಾವು ಈ ಕರೆಯನ್ನು ತಪ್ಪಾಗಿ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಜೀವನ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೇಲೆ ಅವಲಂಬಿತವಾಗಿದೆ. ಇಂದು 9 ಗಂಟೆಗೆ 9 ನಿಮಿಷ ದೀಪ ಹಚ್ಚುವ ಮೂಲಕ ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಈ ಅದ್ಭುತ ಅಭಿಯಾನದಲ್ಲಿ ಪಾಲ್ಗೊಳ್ಳಿ. ಲೈಟ್ ಟು ಫೈಟ್ನಲ್ಲಿ ನೀವು ನನ್ನ ಜೊತೆ ಇರುತ್ತೀರಾ" ಎಂದು ಟ್ವೀಟ್ ಮಾಡಿದ್ದಾರೆ.