ಅಹ್ಮದಾಬಾದ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಿಹಾರ್ ವಿರುದ್ಧ 16 ರನ್ಗಳ ಜಯ ಸಾಧಿಸಿರುವ ರಾಜಸ್ಥಾನ್ ತಂಡ ಸೆಮಿಫೈನಲ್ನಲ್ಲಿ ಬಲಿಷ್ಠ ತಮಿಳುನಾಡನ್ನು ಎದುರಿಸಲಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್, ಮಹಿಪಾಲ್ ಲಾಮ್ರರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 164 ರನ್ಗಳಿಸಿತ್ತು. ಲಾಮ್ರೋರ್ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ ಅಜೇಯ 78 ರನ್ಗಳಿಸಿದರು. ಇವರಿಗೆ ಬೆಂಬಲ ನೀಡಿದ ಭರತ್ ಶರ್ಮಾ 38, ಅಂಕಿತ್ ಲಂಬಾ 38 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ರಾಜಸ್ಥಾನ್ ತಂಡಕ್ಕೆ ನೆರವಾದರು.
165 ರನ್ಗಳ ಗುರಿ ಬೆನ್ನತ್ತಿದ ಬಿಹಾರ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ಗಳಿಸಿ 16 ರನ್ಗಳ ಸೋಲು ಕಂಡಿತು. ಮಂಗಲ್ ಮಹ್ರೌರ್ 58 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 68 ರನ್ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇವರನ್ನು ಹೊರೆತುಪಡಿಸಿದರೆ, ವಿಕೆಟ್ ಕೀಪರ್ ವಿಕಾಶ್ ಯಾದವ್ 27 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ರಾಜಸ್ಥಾನ ಪರ ಖಲೀಲ್ ಅಹ್ಮದ್, ಚಂದ್ರಪಾಲ್ ಸಿಂಗ್ ಮತ್ತು ಅಂಕಿತ್ ಚೌದರಿ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ರಾಜಸ್ಥಾನ್ ತಂಡ ಶುಕ್ರವಾರ ಸೆಮಿಫೈನಲ್ನಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ನಲ್ಲಿ ಪಂಜಾಬ್ ಮತ್ತು ಬರೋಡ ತಂಡಗಳು ಸೆಣಸಾಡಲಿವೆ.
ಇದನ್ನು ಓದಿ:ಕೊನೆಯ 3 ಎಸೆತದಲ್ಲಿ 15 ರನ್ ಸಿಡಿಸಿದ ಸೋಲಂಕಿ : ಸೆಮಿಫೈನಲ್ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!