ಮೆಲ್ಬೋರ್ನ್ (ಆಸ್ಟ್ರೇಲಿಯಾ): ಅಜಿಂಕ್ಯಾ ರಹಾನೆ ಧೈರ್ಯಶಾಲಿ ಮತ್ತು ಚುರುಕಾದ ವ್ಯಕ್ತಿ. ಅವರು ಕ್ರಿಕೆಟ್ ತಂಡಗಳನ್ನು ಮುನ್ನಡೆಸಲು ಜನಿಸಿದ ವ್ಯಕ್ತಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಭಾರತದ ಹಂಗಾಮಿ ನಾಯಕನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಎಂಟು ವಿಕೆಟ್ಗಳ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಇಲ್ಲದೆ ಮತ್ತು ಅಡಿಲೇಡ್ ಓವಲ್ನಲ್ಲಿನ ಹೀನಾಯ ಸೋಲಿನ ನಂತರವೂ ಅಭೂತಪೂರ್ವ ಗೆಲುವು ದಾಖಲಿಸಿದೆ.
"ಅಜಿಂಕ್ಯಾ ರಹಾನೆ ಎಂಸಿಜಿಯಲ್ಲಿ ಭಾರತವನ್ನು ದೋಷರಹಿತವಾಗಿ ನಾಯಕತ್ವ ವಹಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. 2017ರಲ್ಲಿ ಧರ್ಮಶಾಲಾದಲ್ಲಿ ಅವರ ನಾಯಕತ್ವವನ್ನು ನೋಡಿದ ಯಾರಾದ್ರೂ ಕ್ರಿಕೆಟ್ ತಂಡಗಳನ್ನು ಮುನ್ನಡೆಸಲು ಜನಿಸಿದ ವ್ಯಕ್ತಿಯನ್ನು ಗುರುತಿಸುತ್ತಿದ್ದರು ಎಂದಿದ್ದಾರೆ.
2017ರ ಪಂದ್ಯಕ್ಕೂ ಮೆಲ್ಬೋರ್ನ್ ಪಂದ್ಯಕ್ಕೂ ಒಂದುಕ್ಕೊಂದು ಸಾಕಷ್ಟು ಹೋಲಿಕೆಗಳಿವೆ. ಮೊದಲನೆಯದಾಗಿ ಈ ಎರಡು ಪ್ರತಿಸ್ಪರ್ಧಿಗಳ ನಡುವೆ ಉತ್ತಮ ಸ್ಪರ್ಧೆ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಅವರಿಂದ ಅಮೂಲ್ಯ ಕೊಡುಗೆ ಸಿಕ್ಕಿತು. ಅಜಿಂಕ್ಯಾ ರಹಾನೆ ಗೆಲುವಿಗೆ ಅಗತ್ಯವಾದ ರನ್ಗಳನ್ನು ಅಕ್ರಮಣಕಾರಿ ಆಟದಿಂದ ಗಳಿಸಿದ್ದರು ಎಂದು ಚಾಪೆಲ್ ಪತ್ರಿಕೆಯೊಂದರ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.