ಪಲ್ಲೆಕೆಲೆ (ಶ್ರೀಲಂಕಾ):ಏಷ್ಯಾಕಪ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತರರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳಿಗೂ ಏಷ್ಯಾಕಪ್ ಸರಣಿಯ ಮೊದಲ ಪಂದ್ಯ ಇದಾಗಿದೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿ ಸೋಲಿನ ಬಳಿಕ ಬಾಂಗ್ಲಾ ಏಕದಿನ ಏಷ್ಯಾಕಪ್ಗೆ ಸಿದ್ಧವಾಗುತ್ತಿದೆ. ಗೆಲುವಿನೊಂದಿಗೆ ಅಭಿಯಾನ ಶುರು ಮಾಡಲು ಉಭಯ ತಂಡಗಳೂ ತವಕಿಸುತ್ತಿವೆ. ಪಲ್ಲೆಕೆಲೆ ಬ್ಯಾಟಿಂಗ್ಸ್ನೇಹಿ ಪಿಚ್ ಆಗಿದ್ದು, ಸ್ಪಿನ್ ಕೂಡಾ ಇಲ್ಲಿ ಉತ್ತಮ ಪಾತ್ರ ವಹಿಸಲಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಮರ್ವಾನ್ ಅಟ್ಟಪಟ್ಟು ಹೇಳಿದ್ದಾರೆ. ಬಾಂಗ್ಲಾದ ತನ್ಜಿದ್ ಹಸನ್ ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಟಾಸ್ ಬಳಿಕ ಮಾತನಾಡಿ ದಸುನ್ ಶನಕ, "ನಾವು ಮೊದಲಿಗೆ ಬ್ಯಾಟ್ ಮಾಡಲು ಬಯಸಿದ್ದೆವು. ಪಂದ್ಯಕ್ಕೆ ಮಳೆಯ ಅಡ್ಡಿಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಮೊದಲು ಬ್ಯಾಟಿಂಗ್ ಫಲಪ್ರದವಾಗಲಿದೆ. ನಮ್ಮ ತಂಡದಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದರ ನಡುವೆಯೂ ತಂಡ ಗೆಲುವಿನ ಸಾಮರ್ಥ್ಯ ಹೊಂದಿದೆ. ನಮ್ಮಲ್ಲಿ ಆರು ಬ್ಯಾಟರ್, ಇಬ್ಬರು ಆಲ್ರೌಂಡರ್ ಹಾಗು ಮೂವರು ಉತ್ತಮ ಬೌಲರ್ಗಳಿದ್ದಾರೆ" ಎಂದು ಹೇಳಿದರು.
ಬಾಂಗ್ಲಾ ನಾಯಕ ಶಾಕೀಬ್ ಮಾತನಾಡಿ, "ನಾವು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ್ದೇವೆ. ಈ ಪಂದ್ಯದಲ್ಲಿ ಹೆಚ್ಚು ರನ್ಗಳಿಸಲು ಯೋಜನೆ ರೂಪಿಸಲಾಗಿದೆ. ಶ್ರೀಲಂಕಾ ಕೂಡ ಉತ್ತಮ ತಂಡ ಎಂದು ನಮಗೆ ತಿಳಿದಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲೂ ನಾವು ಅತ್ಯುತ್ತಮ ಪ್ರದರ್ಶನ ನೀಡಬೇಕು" ಎಂದರು.