ನವಸಾರಿ(ಗುಜರಾತ್):ಕ್ರಿಕೆಟರ್ಸ್ ಅಂದರೆ ಸಾಕು ಕೋಟ್ಯಂತರ ರೂಪಾಯಿ ಗಳಿಕೆ ಮಾಡ್ತಾರೆ ಅಂದುಕೊಳ್ಳುತ್ತೇವೆ. ಒಂದು ಸಲ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಸಾಕು ಅವರ ಲಕ್ ಚೇಂಜ್ ಆಗಿಬಿಡುತ್ತದೆ. ಆದರೆ, ಇಲ್ಲೊಬ್ಬ ಕ್ರಿಕೆಟಿಗನ ಪರಿಸ್ಥಿತಿ ಮಾತ್ರ ಹೇಳತೀರದಾಗಿದೆ. 2018ರ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದ ಭಾರತದ ಅಂಧರ ತಂಡ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ವೇಳೆ ಅವರಿಗೆ ರಾಷ್ಟ್ರಪತಿ ಸೇರಿದಂತೆ ಅನೇಕರು ಸನ್ಮಾನ ಮಾಡಿ, ಗೌರವಿಸಿದ್ದರು. ಆದರೆ, ಆ ತಂಡದಲ್ಲಿದ್ದ ಸದಸ್ಯನೊಬ್ಬ ಇದೀಗ ಹೊಟ್ಟೆ ಪಾಡಿಗಾಗಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ.
2018ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದ 29 ವರ್ಷದ ನರೇಶ್ ತುಬ್ಡಾ, ಸದ್ಯ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದಾರೆ. ಗುಜರಾತ್ನ ನವಸಾರಿಯಲ್ಲಿ ವಾಸವಾಗಿರುವ ಈ ಪ್ಲೇಯರ್ ಪ್ರತಿದಿನ 250 ರೂಪಾಯಿ ದುಡಿಯುತ್ತಿದ್ದು, ಅದರಿಂದ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕ್ಕದಾದ ಮನೆಯಲ್ಲಿ ವಾಸವಾಗಿರುವ ನರೇಶ್, ಅನೇಕ ಸಲ ಸರ್ಕಾರಿ ನೌಕರಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.
ಇದನ್ನೂ ಓದಿರಿ: ಚೆನ್ನೈಗೆ ಬಂದಿಳಿದ ಧೋನಿ, ಆಗಸ್ಟ್ 13ರಂದು UAEನತ್ತ ಸಿಎಸ್ಕೆ ಪ್ರಯಾಣ!