ಬಾಬು ಅವರ ಸಂಚಿಕೆಗೆ ಪುತ್ರ ಆದಿತ್ಯ, ಸಹೋದರಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಇವರ ಪತಿ ನಟ ಜೈ ಜಗದೀಶ್, ಈ ದಂಪತಿಯ ಮೂವರು ಪುತ್ರಿಯರು ಹಾಗೂ ಹಿತೈಷಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಪೋಟೊವನ್ನು ಆದಿತ್ಯ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೀಕೆಂಡ್ ಸಾಧಕರ ಸೀಟಿನಲ್ಲಿ 'ಮುತ್ತಿನ ಹಾರ'ದ ನಿರ್ದೇಶಕ
ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ಮುಗಿದಿದೆ. ಆದರೆ, ಇದರ ಪ್ರಸಾರ ಯಾವಾಗ ಎಂಬುದು ಸದ್ಯಕ್ಕೆ ರಿವೀಲ್ ಆಗಿಲ್ಲ.
ರಾಜೇಂದ್ರ ಸಿಂಗ್ ಅವರು 1952ರ ಅಕ್ಟೋಬರ್ 22ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ನಿರ್ಮಾಪಕ ಡಿ.ಶಂಕರಸಿಂಗ್. ಅಪ್ಪ ಸ್ಥಾಪಿಸಿದ 'ಮಹಾತ್ಮ ಪಿಕ್ಚರ್ಸ್' ಸಂಸ್ಥೆಯನ್ನು ಮುಂದುವರೆಸಿಕೊಂಡು ಬಂದ ಬಾಬು ಅವರು, ಕನ್ನಡ ಅಲ್ಲದೇ, ಹಿಂದಿ ಮತ್ತು ತೆಲುಗು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. 'ಮುತ್ತಿನಹಾರ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ನಾಗರ ಹೊಳೆ, ಕಿಲಾಡಿ ಜೋಡಿ, ಬಂಧನ, ಅಂತ, ಭರ್ಜರಿ ಬೇಟೆ, ಮುತ್ತಿನ ಹಾರ, ಮುಂಗಾರಿನ ಮಿಂಚು, ಸಿಂಹದ ಮರಿ ಸೈನ್ಯ, ಹೂವು ಹಣ್ಣು, ಹಿಮಪಾತ, ಮಹಾ ಕ್ಷತ್ರಿಯ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.