ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಅದರಲ್ಲೂ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಫರ್ಧಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಚುನಾವಣಾ ಕಣ ಸಾಕಷ್ಟು ರಂಗೇರಿದೆ.
'ನಿಖಿಲ್ ಎಲ್ಲಿದಿಯಪ್ಪ' ಹೆಸರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: ಸಿನಿಮಾ ಮಾಡಲು ಮುಂದಾದ ನಿರ್ಮಾಪಕರು
'ನಿಖಿಲ್ ಎಲ್ಲಿದಿಯಪ್ಪ' ಎಂಬ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಕೆಲವು ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಆದರೆ ಚುನಾವಣೆ ಮುಗಿದ ನಂತರ ಈ ಬಗ್ಗೆ ಚರ್ಚಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಹೇಳಿದ್ದಾರೆ.
ಇನ್ನು ನಿಖಿಲ್ 'ಜಾಗ್ವಾರ್' ಸಿನಿಮಾ ಆಡಿಯೋ ಬಿಡುಗಡೆಯ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಯ್ತು. ಅಂದಿನಿಂದ 'ನಿಖಿಲ್ ಎಲ್ಲಿದಿಯಪ್ಪ' ಎಂಬ ಪದ ಟ್ರೋಲಿಗರ ಬಾಯಿಗೆ ಆಹಾರವಾಯ್ತು. ಈಗ ಪುಟ್ಟ ಮಗುವಿನ ಬಾಯಲ್ಲೂ ಈ ಪದ ನಲಿದಾಡುತ್ತಿದೆ. ಇನ್ನು ಇದೇ ಹೆಸರಿನಲ್ಲಿ ಸಿನಿಮಾ ಮಾಡ್ತೀವಿ ಅಂತ ಕೆಲವು ನಿರ್ಮಾಪಕರು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ಜೋಡೆತ್ತು, ಕಳ್ಳೆತ್ತು, ಸುಮಲತಾ, ಮಂಡ್ಯ ಹೆಣ್ಣು ಎಂಬ ಹೆಸರಿಗೂ ಡಿಮ್ಯಾಂಡ್ ಬಂದಿದೆ. ಈ ಹೆಸರಿನ ಸಿನಿಮಾ ಮಾಡಲು ಟೈಟಲ್ ರಿಜಿಸ್ಟರ್ ಮಾಡಲು ನಿರ್ಮಾಪಕರು ಫಿಲ್ಮ್ ಚೇಂಬರ್ನಲ್ಲಿ ಮನವಿ ಮಾಡಿದ್ದಾರೆ.
ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಇದನ್ನು ನಿರಾಕರಿಸಿದ್ದಾರೆ. ಇದು ಚುನಾವಣೆಗೆ ಸಂಬಂಧಿಸಿದ ವಿಚಾರವಾಗಿರುವುದಿಂದ ಸದ್ಯಕ್ಕೆ ಚುನಾವಣೆ ಮುಗಿಯುವವರೆಗೂ ಈ ಬಗ್ಗೆ ಮಾತನಾಡುವುದಿಲ್ಲ. ನಂತರ ಕಥೆ ಕೇಳಿ ಈ ಟೈಟಲ್ ಕೊಡುವುದೋ ಬೇಡವೋ ಎಂಬುದನ್ನು ಕಾರ್ಯಕಾರಿ ಸಭೆ ಕರೆದು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಚಿನ್ನೇಗೌಡ ಈಟಿವಿ ಭಾರತ್ಗೆ ತಿಳಿಸಿದ್ದಾರೆ.