ಬೆಂಗಳೂರು: ಸ್ಯಾಂಡಲ್ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಚಿತ್ರರಂಗದಲ್ಲಿ ಪ್ರಜ್ವಲಿಸುವ ಮುನ್ನವೇ ಚಿರಂಜೀವಿ ಚಿರ ನಿದ್ರೆಗೆ ಜಾರಿದ್ದಾರೆ. ಸಾವಿರಾರು ಅಭಿಮಾನಿಗಳ ನೋವಿನ ನಡುವೆ ವಾಯುಪುತ್ರ ಮಣ್ಣಲ್ಲಿ ಮಣ್ಣಾಗಿದ್ದಾರೆ.
ತಮ್ಮ ಧ್ರುವ ಸರ್ಜಾ ಆಸೆಯಂತೆ ಕನಕಪುರ ರಸ್ತೆಯ ನೆಲಗುಳಿ ಫಾರ್ಮ್ ಹೌಸ್ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಹಿಂದೂ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅವರ ತಂದೆ ವಿಜಯ್ ಕುಮಾರ್ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ.
ಸಮಾಧಿ ಬಳಿ ಮೇಘನಾ, ಪ್ರಮಿಳಾ ಜೋಷಾಯ್ ಪ್ರಾರ್ಥನೆ ಹಿಂದೂ ಸಪ್ರದಾಯದಂತೆ ಚಿರು ಅಂತ್ಯಕ್ರಿಯೆ ನೆರವೇರಿದ ನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ಪತ್ನಿ ಮೇಘನಾ ರಾಜ್, ಅತ್ತೆ ಪ್ರಮಿಳಾ ಜೋಷಾಯ್ ಸಮಾಧಿ ಬಳಿ ಪ್ರಾರ್ಥನೆ ಮಾಡುವ ಮೂಲಕ ಚಿರುಗೆ ಅಂತಿಮ ವಿದಾಯ ಹೇಳಿದರು.
ಮೊದಲಿಗೆ ಹಿಂದೂ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೇಘನಾ ರಾಜ್ ಕ್ರಿಶ್ಚಿಯನ್ ಸಮುದಾಯದವರಾದ್ದರಿಂದ ಅಂತ್ಯ ಸಂಸ್ಕಾರದ ಬಳಿಕ ಪ್ರಮಿಳಾ ಜೋಷಾಯ್ ಹಾಗೂ ಮೇಘನಾ ರಾಜ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿದರು. ಅದ್ರೆ ಪ್ರಾರ್ಥನೆಯಲ್ಲಿ ಸುಂದರ್ ರಾಜ್ ಭಾಗವಹಿಸಿರಲಿಲ್ಲ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮದುವೆ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ನೆರವೇರಿದ್ದನ್ನು ಇಲ್ಲಿ ಸ್ಮರಿಸಬಹುದು.