ನಿರ್ದೇಶಕ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿ ಪೂರ್ವ ಸಿನಿಮಾ ಅಡ್ಡಕ್ಕೆ ಹೊಸ ನಟಿಯ ಆಗಮನವಾಗಿದೆ. ಯೋಗರಾಜ್ ಭಟ್ ಬಳಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಹರಿಪ್ರಸಾದ್ ಜಯಣ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಚಿತ್ರಕ್ಕೆ ಬಿಗ್ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಪ್ರವೇಶ ಪಡೆದುಕೊಂಡಿದ್ದಾರೆ. ದಿವ್ಯಾ ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಭಟ್ ಅವರ ತಂಡ ಸೇರಿರುವುದು ಅತ್ಯಂತ ಖುಷಿಯ ವಿಷಯ ಎಂದು ಅವರು ಹೇಳಿದ್ದಾರೆ.
ಪದವಿ ಪೂರ್ವ ಚಿತ್ರದ ಪೋಸ್ಟರ್ ದಿವ್ಯಾ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಶೀಘ್ರದಲ್ಲೇ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಈ ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕಳೆದ ತಿಂಗಳಷ್ಟೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆ ಎಂದು ಚಿತ್ರ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಸಂತೋಷ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಕನ್ನಡ ಶೋತೃಗಳ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದರೆ, ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಣ್ಚಳಕ ಹಾಗು ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.
ಬಹುತೇಕ ಚಿತ್ರೀಕರಣ ಮುಗಿಸಿರುವ ಪದವಿಪೂರ್ವ ಸಿನಿಮಾ ಮುಂದಿನ ವರ್ಷ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ.