ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ನಟ ಹಾಗೂ ರಾಜಕಾರಣಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ನಡೆಯುತ್ತಿರುವ ಹೈ ಡ್ರಾಮಾ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಪ್ಪಿ, ಮತಾದಾರರ ಬೆಲೆ ಏನು ಎಂಬುದನ್ನು ಪ್ರಜೆಗಳಿಗೆ ತಿಳಿಸಿದ್ದಾರೆ.
'ಮತದಾರ ಇಲ್ಲಿ ಮೂಕಪ್ರೇಕ್ಷಕ ಮಾತ್ರ'..ರಾಜಕೀಯ ಅರಾಜಕತೆ ಬಗ್ಗೆ ಉಪ್ಪಿ ಆಕ್ರೋಶ
ರಾಜ್ಯ ರಾಜಕೀಯದ ಅರಾಜಕತೆ ಬಗ್ಗೆ ನಟ ಉಪೇಂದ್ರ ಕಿಡಿಕಾರಿದ್ದಾರೆ. ಮತದಾರರಿಗೆ ಕೇವಲ ಒಂದು ದಿನ ಮಾತ್ರ ಬೆಲೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ, ಆನಂತರ ನಾವು ಮೂಕ ಪ್ರೇಕ್ಷಕರು' ಎಂದು ಬುದ್ಧಿವಂತ ಟ್ವೀಟ್ ಮಾಡಿದ್ದಾರೆ. ಇಂತಹ ರಾಜಕೀಯ ಅವ್ಯವಸ್ಥೆ ದೂರು ಮಾಡಲು ಒಂದೇ ಮಾರ್ಗ ಎಂದಿರುವ ಅವರು, ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಬೇಕು, ಇದಕ್ಕಾಗಿ ಬಹುಮತ ಬೇಕು. ಆದ್ದರಿಂದ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು. ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು ಎಂದಿದ್ದಾರೆ.
ಇನ್ನು ಕಳೆದ ಒಂದು ವಾರದಿಂದ ಹಲವು ರಾಜಕೀಯ ಬೆಳವಣೆಗೆಗೆ ಕರ್ನಾಟಕ ರಾಜ್ಯ ಸಾಕ್ಷಿಯಾಗುತ್ತಿದೆ. ಆಡಳಿತದಲ್ಲಿರುವ ಮೈತ್ರಿ ಪಕ್ಷದ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದೆ. ಅಧಿಕಾರ ಉಳಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರಸಾಹಸ ಪಡುತ್ತಿದ್ದಾರೆ, ಬಿಜೆಪಿ ನಾಯಕರು ಸಿಎಂ ಕುಮಾರ ಸ್ವಾಮಿ ವಿಶ್ವಾಸ ಮತ ಮಂಡಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಈ ಎಲ್ಲ ರಾಜಕೀಯ ಚಿತ್ರಣಗಳ ಬಗ್ಗೆ ರಾಜ್ಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.