ಟಾಲಿವುಡ್ ಸ್ಟಾರ್ ದಂಪತಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಇದಕ್ಕೆಲ್ಲಾ ಡಿವೋರ್ಸ್ ಎಕ್ಸ್ಪರ್ಟ್ ಅಮಿರ್ ಖಾನ್ ಕಾರಣ ಎಂದು ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಎರಡು ಸ್ಟೋರಿಗಳನ್ನು ಕಂಗನಾ ಪೋಸ್ಟ್ ಮಾಡಿದ್ದಾರೆ. ಒಂದು ಸ್ಟೋರಿಯಲ್ಲಿ ಪುರುಷರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ನಾಗಚೈತನ್ಯ-ಸಮಂತಾ ದಂಪತಿ ಬೇರೆ ಆಗಲು ಅಮಿರ್ ಖಾನ್ ಕಾರಣ ಎಂದು ದೂರಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ, ವಿಚ್ಛೇದನ ನಡೆದ ಸಮಯದಲ್ಲಿ ತಪ್ಪು ಯಾವಾಗಲೂ ಪುರುಷನದ್ದೇ ಆಗಿರುತ್ತದೆ. ನಾನು ಹೀಗೆ ಹೇಳಿದರೆ ಗೊಡ್ಡು ಸಂಪ್ರದಾಯದಂತೆ ಅಥವಾ ಪೂರ್ವ ನಿರ್ಧರಿತವಾಗಿ ಪೂರ್ವಾಗ್ರಹಪೀಡಿತವಾಗಿ ಮಾತನಾಡುತ್ತಿದ್ದೇನೆ ಎಂದು ಅನಿಸಬಹುದು. ಇದು ವಿಚಿತ್ರ ಎನಿಸಬಹುದು. ಆದರೆ, ಇದು ದೇವರು ಪುರುಷ ಮತ್ತು ಮಹಿಳೆಯರನ್ನು ಸೃಷ್ಟಿಸಿದ ರೀತಿ.
ಪುರುಷ ಬೇಟೆಗಾರ ಮತ್ತು ಅವಳು ಪೋಷಕಿ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ವ್ಯಕ್ತಿ ಮೇಲೆ ದಯೆ ತೋರಿಸುವುದನ್ನು ನಿಲ್ಲಿಸಿ. ವಿಚ್ಛೇದನ ವಿಷಯದಲ್ಲಿ ನೂರರಲ್ಲಿ ಒಬ್ಬ ಮಹಿಳೆಯ ತಪ್ಪು ಇರಬಹುದು. ಆದರೆ, ಬಹುತೇಕ ಸಂದರ್ಭಗಳಲ್ಲಿ ತಪ್ಪು ಪುರುಷರದ್ದೇ ಆಗಿರುತ್ತದೆ ಎಂದು ಕಂಗನಾ ಬರೆದುಕೊಂಡಿದ್ದಾರೆ.