ಮುಂಬೈ: ದೇಶದ ಮೋಸ್ಟ್ ವಾಂಟೆಂಡ್ ಗ್ಯಾಂಗ್ಸ್ಟರ್, ಛೋಟಾ ರಾಜನ್ ಸಹಚರ ಏಜಾಝ್ ಲಕ್ಡಾವಾಲಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಪಾಟ್ನಾದ ಜತ್ತನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿಸಿದ ನಂತರ ಕೋರ್ಟ್ಗೆ ಹಾಜರುಪಡಿಸಿ ಜನವರಿ 21ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ
ಈ ಕುರಿತು ಮಾತನಾಡಿರುವ ಮುಂಬೈನ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂತೋಷ್ ರಸ್ತೋಗಿ ''ಏಜಾಝ್ನ ಮಗಳನ್ನು ಈಗಾಗಲೇ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆಕೆಯಿಂದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ. ಏಜಾಝ್ ಪಾಟ್ನಾಗೆ ತೆರಳುತ್ತಿರುವ ಮಾಹಿತಿ ಬಂದ ಬೆನ್ನಲ್ಲೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ'' ಎಂದು ಸ್ಪಷ್ಟಪಡಿಸಿದರು..
ಯಾರು ಈ ಗ್ಯಾಂಗ್ಸ್ಟರ್ ಏಜಾಝ್ ಲಕ್ಡಾವಾಲಾ..?
ಬಂಧಿತ ಗ್ಯಾಂಗ್ಸ್ಟರ್ ಏಜಾಝ್ ಮೊದಲಿಗೆ ದಾವೂದ್ ಇಬ್ರಾಹಿಂ ಅಥವಾ ಡಿ ಕಂಪನಿಯಲ್ಲಿದ್ದ ಛೋಟಾರಾಜನ್ ಬಳಿ ಕುಕೃತ್ಯಗಳಿಗೆ ಕೈ ಹಾಕಿದ್ದ. ಕೆಲ ವಿವಾದಗಳ ನಂತರ ಛೋಟಾ ರಾಜನ್ ಪ್ರತ್ಯೇಕ ಬಣ ಸ್ಥಾಪಿಸಿದಾಗ ಛೋಟಾ ರಾಜನ್ ಜೊತೆ ಏಜಾಝ್ ಕೂಡಾ ಹೊರನಡೆದ. 2003ರಲ್ಲಿ ಬ್ಯಾಂಕಾಕ್ ಮಾರುಕಟ್ಟೆಯೊಂದರಲ್ಲಿ ನಡೆದಿದ್ದ ಶೂಟೌಟ್ ಒಂದರಲ್ಲಿ ಏಜಾಝ್ ಸತ್ತಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ ಈ ಫೈರಿಂಗ್ನಲ್ಲಿ ಬದುಕುಳಿದ ಏಜಾಝ್ ಕೆನಡಾಗೆ ಸ್ಥಳಾಂತರವಾಗಿದ್ದ. 2004 ಮೇ ತಿಂಗಳಲ್ಲಿ ಕೆನಾಡದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಒಟ್ಟಾವೋದಲ್ಲಿ ಈತನನ್ನು ಬಂಧಿಸಿ ವಿಚಾರಣೆ ಮಾಡಿತ್ತು.
ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ಏಜಾಝ್ ಉತ್ತರ ಅಮೇರಿಕಾದ ಯಾವುದೋ ರಾಷ್ಟ್ರದಲ್ಲಿ ಇರಬಹುದೆಂದು ಊಹಿಸಲಾಗಿತ್ತು. ಆಗಾಗ ಬೇರೆ ಬೇರೆ ರಾಷ್ಟ್ರಗಳಿಗೆ ಪ್ರಯಾಣಿಸುತ್ತಿದ್ದ ಈತನನ್ನು ಹಿಡಿಯುವ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಈತನನ್ನು ಹಿಡಿಯೋದಕ್ಕೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಕೂಡಾ ಜಾರಿಯಾಗಿತ್ತು.
ಏಜಾಝ್ ಮೇಲೆ 20ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳು, ಕೊಲೆ ಯತ್ನ ಹಾಗೂ ದೊಂಬಿ ಪ್ರಕರಣಗಳಿವೆ. ಕೇವಲ 15 ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ನೇಪಾಳಕ್ಕೆ ಹೋಗಲು ಯತ್ನಿಸಿದ್ದ ಏಜಾಝ್ನ ಮಗಳು ಸೋನಿಯಾ ಲಕ್ಡಾವಾಲಾ ಅಲಿಯಾಸ್ ಸೋನಿಯಾ ಶೇಖ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಆಕೆಯನ್ನು ತೀವ್ರವಾಗಿ ವಿಚಾರಣೆ ಮಾಡಲಾಗಿತ್ತು. ನಂತರ ಈಕೆಯ ಮೇಲೆ ವಂಚನೆ, ಪಾಸ್ಪೋರ್ಟ್ ಪೋರ್ಜರಿ ಮಾಡಿದ ಆರೋಪದ ಜೊತೆಗೆ ಸುಲಿಗೆಕೋರರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ಈಗ ಏಜಾಝ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ