ವಾಷಿಂಗ್ಟನ್: ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಘರ್ಷದ ಬಗ್ಗೆ ವರದಿ ಮಾಡಲು ತೆರಳಿದ್ದ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಗಲಭೆಯಲ್ಲಿ ಮೃತಪಟ್ಟ ಡ್ಯಾನಿಶ್ ಸಿದ್ಧಿಕಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಯುಎಸ್ ಶಾಸಕರು ಸಂತಾಪ ಸೂಚಿಸಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಿಕಿ, ಆಫ್ಘನ್ ಸಂಘರ್ಷದ ಬಗ್ಗೆ ವರದಿ ಮಾಡಲು ಪಾಕ್ ಗಡಿಯ ಸ್ಪಿನ್ ಬೋಲ್ಡಾಕ್ಗೆ ತೆರಳಿದ್ದರು. ಈ ವೇಳೆ ನಡೆದ ಸಂಘರ್ಷದಲ್ಲಿ ಅವರು ಹತ್ಯೆಗೀಡಾಗಿದ್ದಾರೆ. ವಿಶ್ವದ ಅತ್ಯಂತ ತುರ್ತು ಮತ್ತು ಸವಾಲಿನ ಸಮಯದಲ್ಲಿ ಸಿದ್ಧಿಕಿ, ಅತ್ಯಂತ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ರು. ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ವರದಿ ಮಾಡಿದಾಗ ಅವರಿಗೆ 2018 ರಲ್ಲಿ ಪುಲಿಟ್ಜೆರ್ ಪ್ರಶಸ್ತಿ ಪಡೆದಿದ್ದರು.
ಸಿದ್ಧಿಕಿ ನಿಧನ ರಾಯಿಟರ್ಸ್ ಮತ್ತು ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೂ ಅಪಾರ ನಷ್ಟವಾಗಿದೆ. ಅಫ್ಘಾನಿಸ್ತಾನದಲ್ಲಿ ಹಲವಾರು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಹಿಂಸಾಚಾರವನ್ನು ಕೊನೆಗೊಳಿಸಲು ನಾವು ಕರೆ ನೀಡುತ್ತಲೇ ಇದ್ದೇವೆ. ಅಫ್ಘಾನಿಸ್ತಾನದಲ್ಲಿ ನ್ಯಾಯಯುತ ಮತ್ತು ಶಾಂತಿ ಇತ್ಯರ್ಥವೇ ಮುಂದಿನ ಮಾರ್ಗವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.