ನ್ಯೂಯಾರ್ಕ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಬಂಡುಕೋರರ ನಡುವೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರೂಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಘರ್ಷದಿಂದ ಆಗುವ ಅನಾಹುತವನ್ನು ತಪ್ಪಿಸಲು ಎರಡೂ ಕಡೆಯವರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಹರಾಮ್ ಅಲ್-ಶರೀಫ್, ಟೆಂಪಲ್ ಮೌಂಟ್ನಲ್ಲಿನ ಘರ್ಷಣೆಗಳು ಮತ್ತು ಶೇಖ್ ಜರ್ರಾ, ಸಿಲ್ವಾನ್ ಪ್ರದೇಶದಲ್ಲಿ ಉಂಟಾದ ಹಿಂಸಾಚಾರದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿರುಮೂರ್ತಿ ಮಾತನಾಡಿದರು. ಗಾಜಾದ ರಾಕೆಟ್ ದಾಳಿಯನ್ನು ಖಂಡಿಸಿದ ಅವರು ಸಂಯಮ ಮತ್ತು ನೇರ ಶಾಂತಿ ಮಾತುಕತೆಗಳನ್ನು ತಕ್ಷಣ ಪುನರಾರಂಭಿಸಬೇಕೆಂದು ಒತ್ತಾಯಿಸಿದರು.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಬಂಡುಕೋರರ ನಡುವೆ ಸಂಘರ್ಷದಲ್ಲಿ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ರಾಕೆಟ್ ದಾಳಿಯಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 10 ಮಕ್ಕಳು ಸೇರಿದ್ದು, 152ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.