ಪಡ್ಡೆ ಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ನ ಭರವಸೆ ಮೂಡಿಸಿದ ನಟ ಶ್ರೇಯಸ್ ಕೆ ಮಂಜು. ನಿರ್ಮಾಪಕ ಕೆ ಮಂಜು ಅವರ ಮಗ ಈಗಾಗಲೇ ರಾಣಾ, ವಿಷ್ಣು ಪ್ರಿಯ ಸಿನಿಮಾಗಳ ಮೂಲಕ ಜನಮನ್ನಾಣೆ ಗಳಿಸಿದ್ದಾರೆ. ಇದೀಗ ಮತ್ತೊಂದು ಹೊಸ ಸಿನಿಮಾಗೆ ಶ್ರೇಯಸ್ ಸಹಿ ಹಾಕಿದ್ದಾರೆ. ಇದು ಇವರ ನಾಲ್ಕನೇ ಸಿನಿಮಾವಾಗಿದೆ. ಮಧು ಗೌಡ ಗಂಗೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ಗೆ ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.
ಮಧು ಗೌಡ ಗಂಗೂರು ಈ ಹಿಂದೆ ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಇದೀಗ ಪೂರ್ಣ ಪ್ರಮಾಣದ ನಿರ್ದೇಶನ ಮಾಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಎಪಿ ಅರ್ಜುನ್ ಹಾಗೂ ವಿರಾಟ್ ನಟನೆಯ ಅದ್ಧೂರಿ ಲವರ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಪ್ರಿಯಾಂಕಾಗೆ ಇದು ಮೂರನೇ ಚಿತ್ರ. ಏಷ್ಯಾನೆಟ್ ಮೂವೀ ಬ್ಯಾನರ್ ನಟಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ.
ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಪಾತ್ರದಲ್ಲಿ ಶ್ರೇಯಸ್ ನಟಿಸುತ್ತಿದ್ದಾರೆ. ಪ್ರಿಯಾಂಕಾ ಅವರು ಬಬ್ಲಿ ಪಾತ್ರದಲ್ಲಿ ನಟಿಸಿದ್ದು, ಇಬ್ಬರ ನಡುವಿನ ಸ್ನೇಹ, ಪ್ರೀತಿಯ ಕಥೆಯನ್ನು ಈ ಚಿತ್ರ ಹೊಂದಿದೆ. ಜೊತೆಗೆ ಒಂದೆರಡು ಆ್ಯಕ್ಷನ್ ಸೀನ್ಗಳು ಕೂಡ ಇದ್ದು, ಇದೊಂದು ಸಂಪೂರ್ಣ ಮನರಂಜನೆಯ ಚಿತ್ರವಾಗಿದೆ ಎಂದು ನಿರ್ದೇಶಕ ಮಧು ಗೌಡ ಗಂಗೂರು ತಿಳಿಸಿದ್ದಾರೆ.