ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ 'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ದಸರಾ ಉಡುಗೊರೆಯಾಗಿ ಮೂಡಿಬಂದ ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಎಲ್ಲೆಲ್ಲೂ ಬಾಲಯ್ಯ ಹವಾನೇ ಇದೆ. ಸಾಮಾಜಿಕ ಸಂದೇಶದ ಜೊತೆಗೆ ಸಾಹಸ ಅಂಶಗಳಿರುವ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಕಾಜಲ್ ತಮ್ಮದೇ ಶೈಲಿಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಅದರಲ್ಲೂ ಬಾಲಯ್ಯ ಸಿನಿಮಾದಲ್ಲಿ ತೆಲಂಗಾಣ ಆಡುಭಾಷೆಯಲ್ಲಿ ಮಾತನಾಡಿದ್ದಾರೆ. ಯಾವುದೇ ದೋಷವಿಲ್ಲದೇ, ಸರಾಗವಾಗಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇತ್ತೀಚೆಗೆ 'ಭಗವಂತ ಕೇಸರಿ' ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಇಡೀ ಚಿತ್ರತಂಡ ಪಾಲ್ಗೊಂಡು ಸದ್ದು ಮಾಡಿತು. ಬಾಲಯ್ಯ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡರು. ಶೀಘ್ರದಲ್ಲೇ ಈ ಸಿನಿಮಾ ಹಿಂದಿಗೆ ಡಬ್ ಆಗಲಿದೆ ಎಂದು ತಿಳಿಸಿದರು. ಇದನ್ನು ಕೇಳಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಬಾಲಯ್ಯ ಅವರ ಧ್ವನಿಯನ್ನು ಹಿಂದಿಯಲ್ಲಿ ಕೇಳಲು ಆಸಕ್ತರಾಗಿದ್ದಾರೆ.
"ನನ್ನ ತಂದೆ ಮತ್ತು ನಾನು ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇವೆ. ಅದಕ್ಕಾಗಿ ನನ್ನ ಪಾತ್ರವನ್ನು ನಾನು ಹಿಂದಿಯಲ್ಲೂ ಡಬ್ ಮಾಡಿದ್ದೇನೆ. ನಾನು ಹಿಂದಿಗೆ ಡಬ್ ಮಾಡುತ್ತಿರುವುದು ಇದೇ ಮೊದಲು. ಈ ಚಿತ್ರದ ಮೂಲಕ ನನ್ನ ಹಿಂದಿ ಭಾಷೆಯ ಹಿಡಿತವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಈ ಚಿತ್ರ ತೆಲುಗು ಜನರ ಶಕ್ತಿಯನ್ನು ಸಾಬೀತುಪಡಿಸುತ್ತದೆ" ಎಂದು ಬಾಲಕೃಷ್ಣ ಸಕ್ಸಸ್ ಮೀಟ್ನಲ್ಲಿ ಹೇಳಿದರು.